Showing posts with label ವಿಜಯಲಕ್ಷ್ಮಿ ಎಂ ಎಸ್. Show all posts
Showing posts with label ವಿಜಯಲಕ್ಷ್ಮಿ ಎಂ ಎಸ್. Show all posts

Wednesday, 13 September 2017

ಮಹಿಳಾ ಜಾಗೃತಿ ಗೀತೆ - 3

ಹೆಣ್ಣನು ಹಡದಿ ಎನ್ನುತ ಬೇಸರ
ಮಾಡುವಿರೇಕೆ ನೀವೆಲ್ಲಾ?
ಹೆಣ್ಣಿಂದ ತಾನೇ ಜಗವಿಂದು ಬೆಳೆವುದು
ಎಂಬುದು ತಿಳಿಯಬೇಕು ನಾವೆಲ್ಲಾ(2)


ಗಂಡಿನ ಹುಟ್ಟು ಹೆಣ್ಣಿನ ಹತ್ಯೆ
ಮಾಡುವಿರೇಕೆ ನೀವೆಲ್ಲಾ? 
ಹೆಣ್ಣಿಲ್ಲದ ಈ ಜೀವನ ಹೇಗೆ
ಎಂಬುದು ತಿಳಿಯಬೇಕು ನಾವೆಲ್ಲಾ (2)


ಗಂಡಿಗೆ ತುಪ್ಪ ಹೆಣ್ಣಿಗೆ ಏಕೆ?
ಕೇಳುವಿರೇಕೆ ನೀವೆಲ್ಲಾ
ಹೆಣ್ಣಿನ ಬಲದಲಿ ಜಗದ ಗೆಲುವಿದೆ
ಎಂಬುದು ತಿಳಿಯಬೇಕು ನಾವೆಲ್ಲಾ (2)


ಗಂಡಿಗೆ ಶಾಲೆ  ಹೆಣ್ಣಗೆ ಮದುವೆ 

ಎನ್ನುವಿರೇಕೆ ನೀವೆಲ್ಲಾ
ಹೆಣ್ಣೊಂದು ಕಲಿತರೆ ಶಾಲೆಯ ತೆರೆದಂತೆ
ಎಂಬುದು ತಿಳಿಯಬೇಕು ನಾವೆಲ್ಲಾ (2)


ಗಂಡು ಮೇಲು ಹೆಣ್ಣು ಕೀಳೆಂದು
ತಿಳಿಯುವಿರೇಕೆ ನೀವೆಲ್ಲಾ
ಹೆಣ್ಣು -ಗಂಡು  ಸಮಾನರಿಬ್ಬರು
ಎಂಬುದು ತಿಳಿಯಬೇಕು ನಾವೆಲ್ಲಾ(2)

ತಿಳಿದು ನಡೆಯಬೇಕು ನಾವೆಲ್ಲಾ(2)

- ವಿಜಯಲಕ್ಷ್ಮಿ ಎಂ ಎಸ್     

Saturday, 19 August 2017

ವ್ಯಕ್ತಿ ಪರಿಚಯ - ಬಚೇಂದ್ರಿಪಾಲ್



ಚಿಕ್ಕ ವಯಸ್ಸಿನಲ್ಲಿ ಕಂಡ ಕನಸ್ಸನ್ನು ಸಾಕಾರ ಮಾಡಿಕೊಂಡ ಮಹಿಳೆಯ ಸಾಹಸಕಥೆಯನ್ನು ನಿಮ್ಮ ಮುಂದಿಡುತ್ತಿದ್ದೇನೆ. ಅವರು ಮತ್ತಾರೂ ಅಲ್ಲ ಮೌಂಟ್ ಎವರೆಸ್ಟ್  ಏರಿದ ಪ್ರಪ್ರಥಮ ಭಾರತೀಯ ಮಹಿಳೆ ಬಚೇಂದ್ರಿಪಾಲ್ ರವರು.
ವ್ಯಾಪಾರಿ ಕಿಶನ್ ಸಿಂಗ್ ಪಾಲ್ ಮತ್ತು ಹಂಸದೇವಿಯವರ ಮೂರನೇ ಮಗಳಾಗಿ ಬಚೇಂದ್ರಿಯವರು  1954 ಮೇ 24 ರಂದು ನಾಕುರಿ ಎಂಬಲ್ಲಿ ಜನಿಸಿದರು. ಬಾಲ್ಯದಿಂದಲೂ ತುಂಟಾಟ ಮಾಡುತ್ತಿದ್ದ ಇವರ ಮೇಲೆ ತಂದೆಯ ಕಷ್ಟಸಹಿಷ್ಣುತೆ ಮತ್ತು ನೈತಿಕತೆ ತುಂಬಾ ಪ್ರಭಾವ ಬೀರಿತ್ತು. ಇವರನ್ನು ಡುಂಡ-ಹರ್ಸಿಲ್ ಶಾಲೆಗೆ ಸೇರಿಸಲಾಯಿತು. ಈ ಶಾಲೆ ಆರು ತಿಂಗಳಿಗೊಮ್ಮೆ ಎರಡೂ ಊರುಗಳಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ಅಂದರೆ ಚಳಿಗಾಲದಲ್ಲಿ ಡುಂಡದಲ್ಲೂ, ಬೇಸಿಗೆಯಲ್ಲಿ ಹರ್ಸಿಲ್ ನಲ್ಲೂ ನಡೆಯುತ್ತಿತ್ತು. ಈ ಶಾಲಾ ಸ್ಥಳಾಂತರದಿಂದ ಬಚೇಂದ್ರಿಗೆ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಾ ನಿಸರ್ಗದ ಮಡಿಲಿನಲ್ಲಿ ಹೆಚ್ಚು ಕಾಲ ಕಳೆಯುವಂತಾಯಿತು. ಚಿಕ್ಕ ಪುಟ್ಟ ಬೆಟ್ಟ ಗುಡ್ಡಗಳನ್ನು ಹತ್ತುವುದು,ತೊರೆಗಳಲ್ಲಿ ಆಟವಾಡುವುದು ತುಂಬಾ ಖುಷಿ ಕೊಡುತ್ತಿದ್ದವು. 
ಒಮ್ಮೆ ಬಚೇಂದ್ರಿ ತಮ್ಮಹನ್ನರಡನೇ ವಯಸ್ಸಿನಲ್ಲಿ  ಶಾಲೆಯ ಮಕ್ಕಳ ಜೊತೆ ಹತ್ತಿರದಲ್ಲಿದ್ದ ಪರ್ವತವನ್ನು ಏರಲು ನಿರ್ಧರಿಸಿ ಯಾವ ಸಿದ್ಧತೆಯೂ ಇಲ್ಲದೆ ಹೊರಟರು. ಉತ್ಸಾಹದಿಂದ ಅರಿವಿಲ್ಲದೆ ಎಲ್ಲರೂ ಸುಮಾರು 4000 ಮೀಟರ್ ಎತ್ತರವನ್ನು ಕ್ರಮಿಸಿದ್ದರು. ಅಲ್ಲಿ ಹಿಮ ಬೀಳುತ್ತಿದ್ದರಿಂದ ಎಲ್ಲರು ಕುಣಿದು ಕುಪ್ಪಳಿಸಿದರು. ತಿನ್ನಲೂ, ಕುಡಿಯಲು ಏನೂಯಿಲ್ಲದೆ ,ಆಯಾಸಗೊಂಡ ಮಕ್ಕಳು ಹಿಂತಿರುಗಲು ದಾರಿ ತಿಳಿಯದಂತಾಗಿ ಭಯಗೊಂಡರು. ರಾತ್ರಿಯಲ್ಲಾ ಅಲ್ಲೇ ಕಳೆದು ಮರುದಿನ ಊರಿಗೆ ಹಿಂತಿರುಗಿದರು. ಈ ಪುಟ್ಟ ಪರ್ವತಾರೋಹಣವೇ ಮುಂದಿನ ಮೌಂಟ್ ಎವರೆಸ್ಟ್ ಆರೋಹಣಕ್ಕೆ ನಾಂದಿಯಾಗುವುದು ಎಂದು ಯಾರೂ ಊಹಿಸಿರಲಿಲ್ಲ.
ಇಲ್ಲಿನ ಹೆಣ್ಣುಮಕ್ಕಳು ಹೆಚ್ಚೇನು ಓದುತ್ತಿರಲಿಲ್ಲ. ಇವರ ಅಕ್ಕನು ಸಹ ಓದದೆ ಮನೆಕೆಲಸಕ್ಕೆ ತೊಡಗಿದಳು. ಆದರೆ ಸ್ವತಂತ್ರ ಮನೋಭಾವದ ಬಚೇಂದ್ರಿ ಸಾಹಸ ಗುಣವುಳ್ಳವಳು. ಅಣ್ಣ ಬಚ್ಚನ್ ಸಿಂಗ್ ಒಬ್ಬ ಕ್ರೀಡಾಪಟು ಹಾಗೂ ಪರ್ವತಾರೋಹಿ. ಅಣ್ಣನ ಸಾಹಸಗಳ ಗುಣಗಳಿಂದ ಪ್ರೇರಣೆಗೊಂಡ ಬಚೇಂದ್ರಿಗೆ ತಾನು ಏನನ್ನಾದರೂ ಸಾಧಿಸಬೇಕೆಂಬ ಛಲ ಮಹತ್ತರವಾಗಿ ಬೆಳೆದಿತ್ತು.
ತುಂಟತನದಲ್ಲಿ ಮುಂದಿರುವಂತೆ ಓದಿನಲ್ಲೂ ಚುರುಕಾಗಿದ್ದ ಬಚೇಂದ್ರಿಯ ಗ್ರಹಣ ಶಕ್ತಿ ಅಪಾರವಾಗಿತ್ತು  ಜೊತೆಗೆ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿಯಿತ್ತು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆದ್ದು  ಬಹುಮಾನಗಳನ್ನು ಪಡೆಯುತ್ತಿದ್ದರು. 8 ನೇ ತರಗತಿಯಲ್ಲಿ ಉತ್ತಮ ಅಂಕಗಳನ್ನು ಪಡೆದು ಪಾಸಾದರೂ  ತಂದೆಯ ಆರ್ಥಿಕ ಪರಿಸ್ಥಿತಿಯಿಂದ ಮುಂದೆ ಓದಿಸಲು ಸಾಧ್ಯವಿಲ್ಲವೆಂದರೂ, ಎದೆಗುಂದದೆ ಬಚೇಂದ್ರಿಯವರು ಮನೆಯ ಕೆಲಸಗಳನ್ನು ಮುಗಿಸಿ ಸಂಜೆಯ ಮೇಲೆ ಸಹಪಾಠಿಗಳಿಂದ 9 ನೇ ತರಗತಿಯ ಪಾಠದ ಪುಸ್ತಕಗಳನ್ನು ತಂದು ಮನೆಯಲ್ಲಿಯೇ ಓದುತ್ತಿದ್ದಳು. ಇದನ್ನು ಕಂಡ ಅಕ್ಕ ತಂದೆಗೆ " ನಾನಂತೂ ಶಾಲೆಗೆ ಹೋಗಲಿಲ್ಲ ಇಷ್ಟು ಆಸಕ್ತಿಯಿರುವ ಇವಳನ್ನು ಮುಂದೆ ಓದಿಸದಿದ್ದರೆ ಇವಳ ಭವಿಷ್ಯವನ್ನು ಹಾಳು ಮಾಡಿದಂತೆ ಇವಳ ಕೆಲಸಗಳನ್ನು ನಾನು ಮಾಡುತ್ತೇನೆ ಇವಳನ್ನು ಶಾಲೆಗೆ ಕಳುಹಿಸಿ " ಎಂದು ಕೇಳಿಕೊಂಡಳು. ಮನ ಕರಗಿದ ತಂದೆ ಶಾಲೆಗೆ ಹೋಗಲು ಅನುಮತಿ ನೀಡಿದರು. 
ಓದಿನ ಜೊತೆಗೆ  ಹೊಲಿಗೆಯನ್ನು  ಕಲಿತು ತಮ್ಮ ಓದಿನ ವೆಚ್ಚವನ್ನು ನೋಡಿಕೊಳ್ಳುತ್ತಿದ್ದರು. ಹತ್ತನೇ ತರಗತಿಯಲ್ಲಿ  ಉತ್ತಮ ಅಂಕಗಳನ್ನು ಪಡೆದು ಉತ್ತೀರ್ಣರಾದರು. ನಂತರ ಪ್ರಾಂಶುಪಾಲರ ಸಹಾಯದಿಂದ ಕಾಲೇಜಿಗೆ ಸೇರಿ ಮುಂದೆ ಬಿ.ಎ ನಲ್ಲಿ ಸಂಸ್ಕೃತವನ್ನು ಐಚ್ಛಿಕ ವಿಷಯವನ್ನಾಗಿ  ತೆಗೆದುಕೊಂಡರು. ಕಾರಣ ಕಾಳಿದಾಸನ ಕೃತಿಗಳನ್ನು  ಓದುವ ಸಲುವಾಗಿ. ಏಕೆಂದರೆ ಅದರಲ್ಲಿ ಅವರ ಕನಸಿನ ತಾಣವಾದ ಹಿಮಾಲಯದ ಬಗ್ಗೆ ಅನೇಕ ವಿಚಾರಗಳಿರುತ್ತವೆಯೆಂದು. 
ಇವರು ಬಿ.ಎ ಓದುವಾಗ ರೈಫೆಲ್ ಶೂಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಪಡೆದರು. ಮತ್ತು  ರೈಫೆಲ್ ನ ಬಿಡಿ ಭಾಗಗಳನ್ನು ಜೋಡಿಸುವ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನವನ್ನು ಪಡೆಯುವುದರ ಮೂಲಕ ಹುಡುಗರಿಗೆ ಮೀಸಲು ಎಂದು ತಿಳಿದಿದ್ದ ಸ್ಪರ್ಧೆಯಲ್ಲಿ ಗೆಲವು ಪಡೆದು ಪ್ರಖ್ಯಾತಿಯಾದರು. ನಂತರ ಬಿ.ಎ ಮುಗಿಸಿ ಡೆಹ್ರಾಡೂನಿನ ಡಿ ವಿ ಎ ಕಾಲೇಜಿನಲ್ಲಿ ಎಂ.ಎ ಗೆ ಸೇರಿ ಪದವಿಯನ್ನು ಪಡೆದರು ನಂತರ ಬಿ.ಎಡ್ ನ್ನು ಮುಗಿಸಿದರು.  ನಾಕುರಿ ಗ್ರಾಮದಲ್ಲಿ ಅತೀ ಹೆಚ್ಚು ಓದಿದ ಮಹಿಳೆಯೆನಿಸಿಕೊಂಡರು ಬಚೇಂದ್ರಿ ಪಾಲ್.
ಓದು ಮುಗಿದ ನಂತರ ಸರಿಯಾದ ಹುದ್ದೆ ಸಿಗದ ಕಾರಣ ಅಣ್ಣನ ನೆರವಿನಿಂದ      N I M ( ನೆಹರು ಇನ್ಸ್‌ಟಿಟ್ಯೂಟ್  ಆಫ್ ಮೌಂಟೆನಿರಿಂಗ್) ಗೆ ಪರ್ವತಾರೋಹಣ ತರಬೇತಿಗಾಗಿ ಅರ್ಜಿಯನ್ನು ಹಾಕಿದರು ಆದರೆ ಸೀಟ್ ಗಳು ಮುಗಿದಿದ್ದ ಕಾರಣ ಮುಂದಿನ ವರ್ಷಕ್ಕೆ ಪ್ರವೇಶ ದೊರೆಯಿತು. ಸಹಪ್ರಾಂಶುಪಾಲರಾಗಿದ್ದ ಮೇಜರ್ ಪ್ರೇಮ್ ಚಂದ್ರ ರವರ ಮಾರ್ಗದರ್ಶನದಲ್ಲಿ ತರಬೇತಿ ಆರಂಭವಾಯಿತು. ಎಲ್ಲರಂತೆ ಒಂದು ಸರ್ಟಿಫಿಕೇಟ್  ಸಿಗಬಹುದೆಂದು ನಿರೀಕ್ಷಿಸಿದ್ದ ಇವರಿಗೆ 'A' ಗ್ರೇಡ್ ದೊರೆಯಿತು. ಜೊತೆಗೆ " ಇದು ಎವರೆಸ್ಟ್ ಗಾಗಿ ಹುಟ್ಟಿ ಜೀವ " ಎಂದು ಪ್ರೇಮ್ ಚಂದ್ರ ರವರ ಹೊಗಳಿಕೆಗೂ ಪಾತ್ರರಾದರು.
1984 ರಲ್ಲಿ ಐ.ಎಂ.ಎಫ್ (ಇಂಡಿಯನ್ ಮೌಂಟೆನಿರಿಂಗ್ ಫೌಂಡೇಶನ್) ಸಂಸ್ಥೆಯು ತನ್ನ 4 ನೇ ಎವರೆಸ್ಟ್ ಪರ್ವತಾರೋಹಣ ಕಾರ್ಯಕ್ರಮವನ್ನು ಏರ್ಪಡಿಸಿತು. ಈ ಬಾರಿಯ ತಂಡದಲ್ಲಿ ಬಚೇಂದ್ರಿಪಾಲ್ ರವರಿಗೆ ಅವಕಾಶ ದೊರೆಯಿತು. ನಂತರ ಎನ್.ಐ.ಎಂ ನ ಮುಂದಿನ ಕೋರ್ಸ್ ನಲ್ಲಿ ಭಾಗವಹಿಸಿ ಸುಮಾರು 6397 ಮೀಟರ್ ಎತ್ತರದ " ಕಪ್ಪು ತುದಿ "(black peak) ಪರ್ವತವನ್ನು ಏರಿ A ಗ್ರೇಡ್ ಪಡೆದರು. ಗುರುಗಳ ಉತ್ತೇಜನದಿಂದ "ಎವರೆಸ್ಟ್ 84 " ರ ಆರೋಹಣದಲ್ಲಿ ಭಾಗವಹಿಸಲು ಒಪ್ಪಿಗೆಯನ್ನು ನೀಡಿ  ಕಠಿಣ ಪರಿಶ್ರಮದಿಂದ ಅಭ್ಯಾಸ ಮಾಡತೊಡಗಿದರು. ನಂತರ 1982 ರಲ್ಲಿ 6672 ಮೀಟರ್ ಎತ್ತರದ ಗಂಗೋತ್ರಿಯನ್ನು ಮತ್ತು ರದುಗಾರಿಯಾ ಪರ್ವತವನ್ನು ಯಶಸ್ವಿಯಾಗಿ ಆರೋಹಣ ಮಾಡಿದರು.
1983 ರಲ್ಲಿ ಎನ್.ಎ.ಎಫ್ ನ ಮುಖ್ಯ ಕಾರ್ಯದರ್ಶಿಯಾಗಿ ಗ್ಯಾನ್ ಸಿಂಗ್ ರವರು ಅಡ್ವೆಂಚರ್ ಕೋರ್ಸ್ ನ್ನು ಹೇಳಿಕೊಡಲು ಬಂದರು. ಅವರ ಸಲಹೆಯಂತೆ ಬಚೇಂದ್ರಿಪಾಲ್ ರವರು ಹೆಣ್ಣು ಮಕ್ಕಳಿಗಾಗಿ ಎವರೆಸ್ಟ್  ಆರೋಹಣ ತರಬೇತಿ ನೀಡುವ ಕ್ಲಬ್ ನ್ನು ಆರಂಭಿಸಿ ಮಕ್ಕಳಿಗೆ ಕಲಿಸುತ್ತಾ, ತಾವೂ ಕಲಿಯುತ್ತ ಮನೆಗೆ ಆರ್ಥಿಕವಾಗಿ ನೆರವಾದರು. ಈ ಸಮಯದಲ್ಲಿ ಅನೇಕ ಪರ್ವತಗಳನ್ನು ಏರಿದರು,ಹರಿವ ನದಿಗಳನ್ನು ದಾಟುವುದನ್ನು, ಕಾಡು ಪ್ರಾಣಿಗಳಂದ ರಕ್ಷಣೆ ಪಡೆಯುವುದನ್ನು ತಿಳಿದರು.
1983 ರಲ್ಲಿ ಬಚೇಂದ್ರಿಪಾಲ್ ಇನ್ನಿಬ್ಬರು ಪರ್ವತಾರೋಹಿಗಳೊಂದಿಗೆ ದೂರದರ್ಶನದ ಸಂದರ್ಶನದಲ್ಲಿ ಭಾಗವಹಿಸಿದರು. ಮತ್ತು 1983 ರಲ್ಲಿ ನಡೆದ   "ಹಿಮಾಲಯನ್ ಮೌಂಟೆನಿರಿಂಗ್ ಅಂಡ್ ಟೂರಿಸಂ" ನ ಸಭೆಯಲ್ಲಿ ಪ್ರಪ್ರಥಮವಾಗಿ ಎವರೆಸ್ಟ್ ಏರಿದ ತೇನ್ ಸಿಂಗ್ ಮತ್ತು ಪ್ರಥಮ ಜಪಾನಿನ ಮಹಿಳೆ ಜುಂಕೋ ತಬೈ ರವರುಗಳು  ಭಾಗವಹಿಸಿದ್ದರು. ಈ ಸಭೆಯಲ್ಲಿ ಬಚೇಂದ್ರಿ ಪಾಲ್ ರವರು ಸಹ ಪಾಲ್ಗೊಂಡಿದ್ದರು.
"ಎವರೆಸ್ಟ್ 84 " ರ ತಂಡದ ಅಂತಿಮ ಆಯ್ಕೆಯಲ್ಲಿ ಇವರು ಆಯ್ಕೆಯಾದರು. ಇದಕ್ಕಾಗಿ ಬೆಟ್ಟ ಗುಡ್ಡಗಳನ್ನು ಹತ್ತಿ ಇಳಿಯುವುದು ಮತ್ತು ಭಾರವಾದ ಕಲ್ಲುಗಳನ್ನು ಹೊರುವುದರಿಂದ ಮೂಲಕ ದೇಹವನ್ನು ಕಠಿಣ ಪರಿಶ್ರಮಕ್ಕೆ ಹೊಂದುವಂತೆ ತಯಾರಾಗುತ್ತಿದ್ದರು. ಇದನ್ನು  ನೋಡಿದ ತಾಯಿಯು " ಇಷ್ಟೆಲ್ಲಾ ಓದಿ ಗುಡ್ಡ ಏಕೆ ಹತ್ತಬೇಕು" ಎಂಬ ಪ್ರಶ್ನೆಗೆ ಇವರು ಉತ್ತರಿಸುತ್ತಾ " ಮುಂಬರುವ ದಿನಗಳಲ್ಲಿ ನಿನ್ನ ಮಗಳನ್ನು ಇಡೀ ಜಗತ್ತೇ ಕೊಂಡಾಡುತ್ತದೆ" ಎಂದು ಹೇಳುತ್ತಿದ್ದರು. ಇವರಿಗೆ ಅಣ್ಣನ ಪೂರ್ಣ ಬೆಂಬಲವಿತ್ತು.
1983 ರ ಡಿಸೆಂಬರ್ ನಲ್ಲಿ ಅಭ್ಯರ್ಥಿಗಳೆಲ್ಲಾ  ಐ.ಎಂ.ಎಫ್ ಸೇರಿ ಅಭ್ಯಾಸವನ್ನು ಪ್ರಾರಂಭಿಸಿದರು. ಮತ್ತು ಶರೀರವನ್ನು ಪರ್ವತದ ಎತ್ತರದ ವಾತಾವರಣಕ್ಕೆ ಹೊಂದುವಂತೆ "ಆಕ್ಲಮಟೈಸ್" ಮಾಡಲು ಅನೇಕ ಕಠಿಣ ಪರಿಶ್ರಮದ ತರಬೇತಿಯನ್ನು ನೀಡಲಾಯಿತು.ನಂತರ ಗ್ಯಾನ್ ಸಿಂಗ್ ರವರ ಸಹಾಯದಿಂದ ಟಾಟಾ ಐರನ್ ಸ್ಟೀಲ್ ಕಂಪನಿಯಲ್ಲಿ ಬಚೇಂದ್ರಿ ಪಾಲ್ ತವರಿಗೆ ಸಾಹಸ ಕ್ರೀಡೆಗಳ ಪ್ರಚಾರಕಿ ಹುದ್ದೆ ದೊರೆಯಿತು.
ತಂದೆ, ತಾಯಿ ಮತ್ತು ತಮ್ಮ ಗ್ರಾಮದವರೆಲ್ಲರ ಹಾರೈಕೆಯೊಂದಿಗೆ ಬಚೇಂದ್ರಿ ಪಾಲ್ ರವರು ಎವರೆಸ್ಟ್ ಯಾನಕ್ಕೆ ದೆಹಲಿಗೆ ಹೊರಟರು. 1984 ರ ಮಾರ್ಚ್ 7 ರಂದು "ಎವರೆಸ್ಟ್ 84 " ರ ತಂಡ ದೆಹಲಿಯಿಂದ ಹೊರಟು ಕಠ್ಮಂಡುಗೆ ತೆರಳಿ ಮುಂದೆ ಜರಿ ಯ ಮೂಲಕ ನಾಮಚೆ ಬಜಾರ್ ನ್ನು ಸೇರಿತು. ಇಲ್ಲಿಂದ ಹಿಮಾಲಯವನ್ನು ಹತ್ತಿರದಿಂದ ನೋಡಿದ ಬಚೇಂದ್ರ ಪಾಲ್ ರವರಲ್ಲಿ ಏರುವ ತವಕ ಹೆಚ್ಚಾಗಿ ನಿಂತಲ್ಲಿಯೇ ಕೈ ಮುಗಿದು "ಓ ಮಹಾತಾಯಿ  ನಿನ್ನ ಮಗಳು ನಿನ್ನನ್ನು ನೋಡಲು ಕಾತುರದಿಂದ ಬಂದಿದ್ದಾಳೆ ದಯ ಮಾಡಿ ಪ್ರೀತಿಯಿಂದ ನಿನ್ನಲ್ಲಿ ಸೇರಿಸಿಕೊ " ಎಂದು ಬೇಡಿದರು. 
ಇಲ್ಲಿಂದ ಹೊರಟ ತಂಡ ಲಾಮರವರಿಂದ ಆಶೀರ್ವಾದ ಪಡೆದು ಫೆರಿಚೆ ಎಂಬ ಸ್ಥಳಕ್ಕೆ ಬಂದರು. ಅತಿಯಾದ ಹಿಮಪಾತದಿಂದ ಸಾವಿನ ಸುದ್ದಿ ಕೇಳಿದ ಬಚೇಂದ್ರಿ ಪಾಲ್ ರವರೂ ಅಳುಕಿದರು. ನಂತರ ಕರ್ನಲ್ ಕುಲಾಲ್ ಮತ್ತು ಪ್ರೇಮ್ ಚಂದ್ ರವರ ಮಾತುಗಳಿಂದ ಸ್ಪೂರ್ತಿಗೊಂಡರು. ಹಾಗೂ ಮತ್ತೊಮ್ಮೆ ಭೇಟಿಯಾದ ತೇನ್ ಸಿಂಗ್ ಅಳುಕಿದ ಇವರಿಗೆ " ಎಲ್ಲಾ ಮಹಾ ಪ್ರಯಾಣಗಳು ಶುರುವಾಗುವುದು ಮೊದಲ ಹೆಜ್ಜೆಯಲ್ಲಿಯೇ, ನಿನ್ನ ಮೊದಲ ಪ್ರಯತ್ನ ಯಶಸ್ವಿಯಾಗಲಿ ಹೋಗಿ ಬಾ" ಎಂದು ಹಾರೈಸಿದರು. ಇದರಿಂದ " ಏನೇ ಆದರೂ ಸರಿ ಎವರೆಸ್ಟ್ ಅನ್ನು ಏರುವೆ" ಎಂಬ ಛಲ ದೃಢವಾಯಿತು. 
ಮೂರು ಪಂಗಡಗಳಾಗಿ ಹೊರಟ ತಂಡ ತಮ್ಮ ಪ್ರಯಾಣವನ್ನು ಮುಂದುವರಿಸಿತು. 1984 ರ ಏಪ್ರಿಲ್ 14-15 ರಂದು ಹಿಮಪಾತ ಪ್ರಾರಂಭವಾಗಿ ಲೋತ್ಸೆಯ ಶಿಖರದಿಂದ ಹಿಮಗಡ್ಡೆಗಳು ಕೆಳಗುರುಳುತ್ತಿದ್ದವು. ಏನಾಗುತ್ತಿದೆ ಎಂದು ಅರಿವಾಗುವ ಮೊದಲೇ ಎಲ್ಲರನ್ನೂ ಹಿಮದರಾಶಿ ಆವರಿಸಿತು.ಎಲ್ಲರೂ ಹಿಮಗಡ್ಡೆಗಳನ್ನು ಕತ್ತರಿಸಿ ಹೊರ ಬಂದರು. ಹೀಗೆ ಹೊರ ಬಂದ ಬಚೇಂದ್ರಿ ಪಾಲ್ ತಮ್ಮ ನೋವನ್ನು ಲೆಕ್ಕಿಸದೆ ಎಲ್ಲರ ಶುಶ್ರೂಷೆ ಮಾಡಿದರು. ಒಬ್ಬರಿಗೊಬ್ಬರು ಧೈರ್ಯ ಹೇಳುತ್ತಾ  ತಮ್ಮ ಪ್ರಯಾಣವನ್ನು ಮುಂದುವರಿಸಿ ಮೇ 22 ರ ರಾತ್ರಿ ಸೌತ್ ಕೋಲ್ ನ್ನು ತಲುಪಿದರು. ಮಾರನೆಯ ದಿನ ಆಂಗ್ ದೋರ್ಜಿ ಯೊಂದಿಗೆ ಬಚೇಂದ್ರಿಪಾಲ್ ಎವರೆಸ್ಟ್ ನ್ನು ಏರಲು ಹೊರಟರು.ಎಲ್ಲಾ ಅಡೆತಡೆಗಳನ್ನು ಎದುರಿಸುತ್ತಾ, ದೃಢವಾದ ಹೆಜ್ಜೆಯಳನ್ನಿಡುತ್ತ ಮಧ್ಯಾಹ್ನ ಸುಮಾರು ಒಂದು ಘಂಟೆಗೆ ಬಚೇಂದ್ರಿಯವರು ಪ್ರಪಂಚದ ಅತಿ ಎತ್ತರದ ಎವರೆಸ್ಟ್ ನ ಶೃಂಗದಲ್ಲಿ ಪಾದಾರ್ಪಣೆ ಮಾಡಿ, ತಲೆ ಬಾಗಿ ನಮಸ್ಕರಿಸಿದರು. ಭಾರತದ ತ್ರಿವರ್ಣ ಧ್ವಜ ಮತ್ತು 7 ಸಿಸ್ಟರ್ ತಂಡದ ಧ್ವಜವನ್ನು ನೆಟ್ಟು ಅಲ್ಲಿಯೇ ಸುಮಾರು 43 ನಿಮಿಷಗಳನ್ನು ಕಳೆದರು. 

ಹಿಂದಿರುಗಿದ ಇವರು ಅನೇಕ ಸಭೆ, ಸಮಾರಂಭ ಹಾಗೂ ಸಂದರ್ಶನಗಳಿಲ್ಲಿ ಭಾಗವಹಿಸಿದರು. ಎವರೆಸ್ಟ್ ಅಲ್ಲದೆ ಯೂರೋಪಿನ ಅತೀ ಎತ್ತರದ ಶಿಖರ ಮೌಂಟ್ ಬ್ಲಾಕ್ ನ್ನು ಏರಿದರು.
1985 ರಲ್ಲಿ ಮಹಿಳೆಯರೇ ಇದ್ದ ಭಾರತ-ನೇಪಾಳ ಪರ್ವತಾರೋಹಣದ ತಂಡದ ನೇತೃತ್ವ ವಹಿಸಿ ಯಶಸ್ವಿಯಾಗಿ ಆರೋಹಣ ಮಾಡಿ ಬಂದರು.ಈ ಆರೋಹಣ ಏಳು ದಾಖಲೆಗಳನ್ನು ನಿರ್ಮಿಸಿತು. 
1994 ರಲ್ಲಿ ಸಾಹಸ ರಾಫ್ಟಿಂಗ್ ಕ್ರೀಡೆಯ ಮಹಿಳಾ ತಂಡದ ಮುಖ್ಯಸ್ಥರಾದರು.

 1994 ರಲ್ಲಿ ಮೊದಲ ಮಹಿಳಾ ಪರ್ವತಾರೋಹಣದ ಗುಂಪಿನೊಂದಿಗೆ "ಇಂದಿರಾ ಕೋಲ್ "ಆರೋಹಣ ಮಾಡಿದರು. 2007 ರಲ್ಲಿ "ಥಾರ್ ಡೆಸೆರ್ಟ್ ಆಲ್ ವುಮೆನ್ ಎಕ್ಸ್ ಪೆಡಿಷನ್" ನ ಮುಖಂಡರಾಗಿ ಥಾರ್ ಮರುಭೂಮಿಯ 2000 ಕಿಲೋ ಮೀಟರ್ ಕಠಿಣ ಹಾದಿಯನ್ನು ಕ್ರಮಿಸುವುದರ ಮೂಲಕ ಕೊರೆಯುವ ಚಳಿಯಲ್ಲಿ ಮಾತ್ರವಲ್ಲದೆ ಮರುಭೂಮಿಯಲ್ಲೂ ತಮ್ಮ ಸಾಹಸಯಾತ್ರೆಯನ್ನು ತೋರಿದರು.

ಇವರ ಸಾಹಸ ಕಾರ್ಯಗಳಿಂದ ಸ್ಪೂರ್ತಿಗೊಂಡ 48 ವರ್ಷದ ಎರಡು ಮಕ್ಕಳ ತಾಯಿ ಪ್ರೇಮಲತಾ ಅಗರ್ ವಾಲ್ ರವರನ್ನು ಪ್ರೋತ್ಸಾಯಿಸಿ, ತರಬೇತಿ ನೀಡಿ 2011ರಲ್ಲಿ ಎವರೆಸ್ಟ್ ಅನ್ನು ಆರೋಹಣ ಮಾಡಲು ಕಾರಣರಾದರು. ಪ್ರೇಮಲತಾರವರು ಎವರೆಸ್ಟ್  ಏರಿದ ಅತ್ಯಂತ ಹಿರಿಯ ಮಹಿಳೆ ಎಂಬ ದಾಖಲೆಯನ್ನು ನಿರ್ಮಿಸಿದರು.  2012 ರಲ್ಲಿ ಪೆಲ್ವಿಕ್ ಮೂಳೆಗೆ ಹೊಡೆತ ಬಿದ್ದು ಒಂದು ಕಾಲನ್ನು ಸಂಪೂರ್ಣವಾಗಿ ಕಳೆದುಕೊಂಡು ಇನ್ನೊಂದು ಕಾಲಿಗೆ ಕೃತಕ ರಾಡ್ ನ್ನು ಹಾಕಿಸಿಕೊಂಡಿದ್ದ ಅರುಣಿಮಾ ಸಿನ್ಹಾ ರವರು ಬಚೇಂದ್ರಪಾಲ್ ರವರನ್ನು ಭೇಟಿ ಮಾಡಿ ತಮ್ಮ ಎವರೆಸ್ಟ್ ಏರುವ ಆಸೆಯನ್ನು ತಿಳಿಸಿದಾಗ ಎಲ್ಲರಂತೆ ಇವರನ್ನು ಹೀಯಾಳಿಸದೆ, ಪ್ರೋತ್ಸಾಹಿಸಿ ಉತ್ತಮ ತರಬೇತಿ ನೀಡಿದರ ಫಲವಾಗಿ ಅರುಣಿಮಾರವರು ಒಂಟಿ ಕಾಲಿನಲ್ಲಿ ಎವರೆಸ್ಟ್ ಏರಿದ ಪ್ರಪಂಚದ ಪ್ರಥಮ ಮಹಿಳೆ ಎನಿಸಿಕೊಂಡರು.

2013 ರಲ್ಲಿ  ಉತ್ತರಾಖಂಡ್ ನಲ್ಲಿ ಜಲಪ್ರಳಯವಾದಾಗ ಜನರ ನೆರವಿಗಾಗಿ ಸೈನ್ಯ ಕಾರ್ಯಾಚರಣೆಯೊಂದಿಗೆ ಕೈಜೋಡಿಸುವುದರ ಮೂಲಕ ಮಾನವೀಯತೆ ತೋರಿದರು.
ಪರ್ವತಾರೋಹಣದೊಂದಿಗೆ ಇವರು ಮಕ್ಕಳ ಬಗ್ಗೆ ಅತಿಯಾದ ಪ್ರೀತಿ ಇದ್ದುದರಿಂದ, ಅವರಿಗೆ ಪರಿಸರದ ಬಗ್ಗೆ, ಅದನ್ನು ಸಂರಕ್ಷಿಸುವ ಬಗ್ಗೆ ಅರಿವು ಮೂಡಿಸುತ್ತಿದ್ದರು. ಪರಿಸರಪ್ರೇಮಿಯಾಗಿದ್ದ ಇವರು ಅಭಿವೃದ್ಧಿಯ ಹೆಸರಿನಲ್ಲಿ ನಾಶವಾಗುತ್ತಿದ್ದ ಅರಣ್ಯ ಸಂಪತ್ತನ್ನು ಉಳಿಸಲು ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದ್ದರು.
ತಮ್ಮ ಸಾಹಸ ಕಾರ್ಯಗಳಗೆ ಬಚೇಂದ್ರಿ ಪಾಲ್ ರವರು ಪಡೆದ ಪ್ರಶಸ್ತಿಗಳನ್ನು ಪಡೆದರು.
1984 ರಲ್ಲಿ ಐ.ಎಂ.ಎಫ್ ನಿಂದ ಚಿನ್ನದ ಪದಕವನ್ನು ಪಡೆದರು.
1984 ರಲ್ಲಿ ಭಾರತ ಸರ್ಕಾರ ಪದ್ಮಶ್ರೀ  ಪ್ರಶಸ್ತಿಯನ್ನು ನೀಡಿ ಗೌರವಿಸಿತು.
1985 ರಲ್ಲಿ ಉತ್ತರ ಪ್ರದೇಶದ ರಾಜ್ಯ ಶಿಕ್ಷಣ ಇಲಾಖೆ ಚಿನ್ನದ ಪದಕವನ್ನು ನೀಡಿತು.
1986 ರಲ್ಲಿ ಭಾರತ ಸರ್ಕಾರ ಅರ್ಜುನ ಪ್ರಶಸ್ತಿಯನ್ನು ನೀಡಿತು.
1986 ರಲ್ಲಿ ಕೋಲ್ಕತ್ತ ಮಹಿಳೆಯ ಅಧ್ಯಯನ ಸಂಸ್ಥೆಯು ಪ್ರಶಸ್ತಿಯನ್ನು ನೀಡಿತು.
1990 ರಲ್ಲಿ ಗಿನ್ನೀಸ್ ಪುಸ್ತಕದಲ್ಲಿ ಹೆಸರು ದಾಖಲೆಯಾಯಿತು.
1994 ರಲ್ಲಿ ಭಾರಯ ಸರ್ಕಾರವು ನ್ಯಾಶನಲ್ ಅಡ್ವೆಂಚರ್ ಪ್ರಶಸ್ತಿಯನ್ನು ನೀಡಿತು.
1995 ರಲ್ಲಿ ಉತ್ತರ ಪ್ರದೇಶ ರಾಜ್ಯ ಸರ್ಕಾರ ಯಶ್ ಪ್ರಶಸ್ತಿಯನ್ನು ನೀಡಿತು.
1997 ರಲ್ಲಿ ಗಢವಾಲ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದರು.
2013-14 ರಲ್ಲಿ ಮಧ್ಯೆ ಪ್ರದೇಶದ ಸರ್ಕಾರ ಸಾಂಸ್ಕೃತಿಕ ಸಂಸ್ಥೆಯಿಂದ ವೀರಾಂಗನೆ ಲಕ್ಷ್ಮೀಬಾಯಿ ಪ್ರಶಸ್ತಿಯನ್ನು ಪಡೆದರು.
ಹೀಗೆ " ಮನಸ್ಸಿದ್ದರೆ  ಮಾರ್ಗ " ಎಂಬಂತೆ ತಾವು ಚಿಕ್ಕ ವಯಸ್ಸಿನಲ್ಲಿ ಕಂಡ ಕನಸ್ಸನ್ನು ನನಸು ಮಾಡಿಕೊಳ್ಳಲು ಸತತ ಅಭ್ಯಾಸ ಮತ್ತು ಕಠಿಣ ಪರಿಶ್ರಮದಿಂದ ಎವರೆಸ್ಟ್  ಏರಿದ ಪ್ರಥಮ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದ ಇವರು ಎಲ್ಲರಿಗೂ ಸ್ಪೂರ್ತಿ ನೀಡಿ ಮಾದರಿಯಾಗಿದ್ದಾರೆ.

- ಎಂ ಎಸ್ ವಿಜಯಲಕ್ಷ್ಮಿ 

Monday, 17 July 2017

ಪುಟ್ಕಥೆಗಳು -


ಯಾವಾಗಲೂ ಮಂಕಾಗಿರುತ್ತಿದ್ದ ಮಡದಿಯನ್ನು "ಯಾಕ್ಹೀಗೆ, ನಿನಗೇನು ಕಡಿಮೆಯಾಗಿದೆ? ನೀ ಕೇಳಿದ್ದನೆಲ್ಲಾ ಕೊಡಿಸುತ್ತೀನಲ್ಲ" ಎಂದನು ಕೋಪದಿಂದ ಗಂಡ.  "ಎಲ್ಲಾ ಅತಿಯಾಗಿರುವುದೆ ಕಾರಣ" ಎಂದಳವಳು!!!


"ಎಲ್ಲರೊಡನೆ ಹೊಂದಿಕೊಂಡು ಹೋದರೆ ಬದುಕು ಸೊಗಸು"ಎಂದು ಮೊಮ್ಮಗಳಿಗೆ ಹೇಳಿದಳು ಅಜ್ಜಿ.  "ಇದನ್ನು ನಿನ್ನ ಮಗನಿಗೂ ಕಲಿಸಿದ್ದರೆ  ನನ್ನಮ್ಮನೂ ಇದೇ ಮನೆಯಲ್ಲಿರುತ್ತಿದ್ದಳು ನೊಂದು ನುಡಿದಳವಳು!!


"ತಪ್ಪು ಮಾಡಲು ಅವಕಾಶ ಕೊಡುವುದೂ ಒಂದು ದೊಡ್ಡ ತಪ್ಪು" ಎಂದ ಗೆಳತಿಯ ಮಾತಿನಿಂದ ಎಚ್ಚೆತ್ತು, ಇದುವರೆವಿಗು ಮೇಲಧಿಕಾರಿಯ ಕಿರುಕುಳವನ್ನು ಮೌನವಾಗಿ ಸಹಿಸಿ ಸಾಕಾಗಿದ್ದ ಅವಳು, ಅವನನ್ನು ಎದುರಿಸಲು ಸಜ್ಜಾದಳು!!


"ಗೊತ್ತಿದ್ದು ತಪ್ಪು ಏಕೆ ಮಾಡಿದೆ? ಮನೆಗೆ ತಡವಾಗಿ ಬಂದರೆ ಅಪ್ಪ ಬೈಯುತ್ತಾರೆ ಅಂತ ಗೊತ್ತಿಲ್ಲವಾ?" ಕೇಳಿದಳು ಮಗಳನ್ನು. "ಅಮ್ಮ, ಆದರೆ ಗೊತ್ತಿದ್ದೂ ದಿನಾ ಕುಡಿದು ತಡವಾಗಿ ಮನೆಗೆ ಬರುತ್ತಿದ್ದಾರಲ್ಲ ಅಪ್ಪ, ಅದು ಸರೀನಾ?" ಕೇಳಿದ ಅಲ್ಲೇ ಇದ್ದ ಮಗ!!


“ಹಿರಿಯರನ್ನು ಏಕೆ ರೇಗಿಕೊಂಡೆ, ನೀನು ನಡೆದುಕೊಂಡು ರೀತಿ ಸರೀನಾ? ಮಗಳನ್ನು ಪ್ರಶ್ನಿಸಿದಳು ಅಮ್ಮ. "ನೀತಿ ಬಿಟ್ಟು ನಡೆದ ಅವರಿಗೆ ಗೌರವ ಕೊಡಬೇಕಾ, ನೀನೆ ಹೇಳು" ಎಂದಳು ಮಗಳು.


ಪದೇ ಪದೇ ತುಳಿತಕ್ಕೆ ಒಳಗಾದ ಅವಳು ದಾರಿಕಾಣದೆ ಕುಳಿತ್ತಿದ್ದಳು. ಮಗಳು "ಉಳಿವಿಗಾಗಿ ಹೋರಾಟ" ಎಂದು ಓದುತ್ತಿದ್ದನ್ನು ಕೇಳಿ  ಎದ್ದು ನಿಂತಳು!!!


ಪ್ರೀತಿಯ ಬಗ್ಗೆ ಮಾತನಾಡುತ್ತಿದ್ದ ಆಕೆ, ಗೆಳತಿಗೆ ಹೇಳಿದಳು "ಪ್ರೀತಿಗೆ ಬೆಲೆ ಕಟ್ಟಲಾಗದು." ಆದರೆ  ಬೆಲೆ ಕಟ್ಟಿಯೇ ಬಿಟ್ಟ ಆಕೆಯ ದತ್ತು ಮಗ!!


ಗಂಡ ಮತ್ತು ಮೈದುನಂದಿರ ದರ್ಪ, ದೌರ್ಜನ್ಯದಿಂದ ಬೇಸರಗೊಂಡು  ಸಾಯಲು ನಿರ್ಧರಿಸಿದಳು ಅವಳು. "ನಿನ್ನ ಮಗಳ ಗತಿಯೇನು? ಅವಳೂ ನಿನ್ನಂತಾಗಬೇಕೆ?" ಪ್ರಶ್ನಿಸಿದಳು ಗೆಳತಿ.  ತನ್ನ ನಿಲುವನ್ನು ಬದಲಿಸಿಕೊಂಡ ಆಕೆ ಪ್ರತಿಭಟಿಸಲು ತಯಾರಾದಳು!! 


"ನನ್ನನ್ನು ನಂಬು ನಾನು ಏನೂ ತಪ್ಪು  ಮಾಡಿಲ್ಲ " ಎಂದು ಎಷ್ಟು  ಹೇಳಿದರೂ ಕೇಳುತ್ತಿರಲಿಲ್ಲ ಅವಳನ್ನು, ಮದುವೆಯಾಗಬೇಕಿದ್ದ ಹುಡುಗ." ನಂಬಿಕೆಯೇ ಇಲ್ಲ ಎಂದ ಮೇಲೆ ಮದುವೆ ಏಕೆ?" ಅವನನ್ನು ಬಿಟ್ಟು ಹೊರಟಳವಳು!!


"ಯಾವತ್ತೂ  ಎದುರುತ್ತರ ಕೊಡದಿದ್ದವಳು ಇಂದೇಕೆ ಈ ರೀತಿ ಮಾತನಾಡುತ್ತಿರುವೆ?" ಕೇಳಿದ ಗಂಡ ಮಡದಿಯನ್ನು ಕೋಪದಿಂದ.  "ಬದಲಾವಣೆ ಈ ಲೋಕದ ನಿಯಮ, ನಾನೂ ಅದರಲೊಬ್ಬಳಲ್ಲವೇ?" ಕೇಳಿದಳು!!"



 - ವಿಜಯಲಕ್ಷ್ಮಿ ಎಂ ಎಸ್      

Monday, 8 May 2017

ಪುಸ್ತಕ ವಿಮರ್ಶೆ - ಮರುಭೂಮಿಯ ಹೂ



ವಾರಿಸ್ ಡಿರಿ, ಪ್ರಖ್ಯಾತ ರೂಪದರ್ಶಿಯ ಆತ್ಮಕಥನವಾದ "ದಿ ಡೆಸರ್ಟ್ ಫ್ಲವರ್" ಅನ್ನು ಡಾ. ಎನ್ ಜಗದೀಶ್ ಕೊಪ್ಪರವರು "ಮರುಭೂಮಿಯ ಹೂ" ಎಂದು ಬಹಳ ಸರಳವಾಗಿ ಅನುವಾದಿಸಿ ಬರೆದಿದ್ದಾರೆ. ಆಫ್ರಿಕಾದ ಹೆಣ್ಣು ಮಗಳೊಬ್ಬಳು ಅನುಭವಿಸಿದ ನೋವು, ನಲಿವುಗಳನ್ನೊಳಗೊಂಡ ಅವಳ ಸಾಹಸ ಕಥೆಯನ್ನು ಓದುಗರ ಮನ ಮುಟ್ಟುವಂತೆ ಬರೆದಿದ್ದಾರೆ. 
ಈ ಕೃತಿಯು "ಅತ್ಯುತ್ತಮ ಅನುವಾದ ಕೃತಿ"ಎಂಬ ಪ್ರಶಸ್ತಿಯನ್ನು ಪಡೆದಿದೆ. ಈ ಆತ್ಮಕಥೆ ಒಟ್ಟಾರೆ 85 ಭಾಷೆಗಳಲ್ಲಿ ಪ್ರಕಟಗೊಂಡು ಅತ್ಯಂತ  ಹೆಚ್ಚು ಮಾರಾಟವಾದ ಕೃತಿಗಳಲ್ಲಿ ಒಂದಾಗಿದೆ.
ಆಫ್ರಿಕಾದ ಸೋಮಾಲಿಯ ರಾಷ್ಟ್ರದ ಮುಸ್ಲಿಂ  ಅಲೆಮಾರಿ  ಬುಡಕಟ್ಟಿನ ಜನಾಂಗದ ತುಂಬು ಕುಟುಂಬದಲ್ಲಿ ಜನಿಸಿದಳು ವಾರಿಸ್. ವಾರಿಸ್ ಎಂದರೆ ಸೋಮಾಲಿಯ ಭಾಷೆಯಲ್ಲಿ "ಮರಳುಗಾಡಿನಲ್ಲಿ ಅರಳುವ ಒಂದು ಹೂವಿನ ಹೆಸರು."
ತಂದೆ ಅಲೆಮಾರಿ ಜನಾಂಗ, ತಾಯಿ ಮೊಗದಿಶು ನಗರದ ಸುಸಂಸ್ಕೃತ ಕುಟುಂಬದಿಂದ ಬಂದವಳು. ಶಾಲೆ, ಶಿಕ್ಷಣ ಏನು ಎಂದರಿಯದ ಇವರು ಚಾಪೆ ಹೆಣೆಯುವುದು, ಬುಟ್ಟಿ ಹೆಣೆಯುವುದು, ಸಾಕು ಪ್ರಾಣಿಗಳ ಪೋಷಣೆ  ಮತ್ತು ರಕ್ಷಣೆ ಇವೇ ಮೊದಲಾದವುಗಳನ್ನು ತಮ್ಮ ಮಕ್ಕಳಿಗೆ ಕಲಿಸುತ್ತಿದ್ದರು. ಸೋಮಾಲಿಯದಲ್ಲಿ ಅವಿಭಕ್ತ ಕುಟುಂಬ ಪದ್ಧತಿಯಿದ್ದು, ಕಿರಿಯರು ಹಿರಿಯರಿಗೆ ಗೌರವ ತೋರುವುದು ಇವರ ವಿಶೇಷ ಗುಣವಾಗಿದೆ. ಕುರಿ, ಮೇಕೆ, ಒಂಟೆಗಳನ್ನು ಸಾಕುತ್ತಿದ್ದರು. ಮರುಭೂಮಿಯಾದ್ದರಿಂದ ಪ್ರಾಣಿಗಳ ಮೇವು ನೀರು ಹುಡುಕುವುದರಲ್ಲೇ ಇವರ ದಿನಚರಿ ಮುಗಿದು ರಾತ್ರಿ ವೇಳೆಯಲ್ಲಿ ಮಾತ್ರವೇ ಮನೆಯವರೆಲ್ಲಾ ಒಟ್ಟಾಗಿ ಸೇರುತ್ತಿದ್ದದ್ದು. ಹೀಗೆ ಬೆಳೆದ ವಾರಿಸ್ 4 ವರ್ಷದಲ್ಲಿಯೇ ತನ್ನ ತಂದೆಯ ಸ್ನೇಹಿತನಿಂದ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದಳು.
ಆಫ್ರಿಕಾದ ಬಹುತೇಕ ಮುಸ್ಲಿಂ ಬುಡಕಟ್ಟು ಜನಾಂಗದಲ್ಲಿ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಅತಿ ಅಮಾನುಷವಾದ ಆಚರಣೆಯೆಂದರೆ ಹೆಣ್ಣು ಮಕ್ಕಳು ರಜಸ್ವಲೆಯಾಗುವ ಮೊದಲೆ ಮಾಡುವ ಗುಪ್ತಾಂಗ ಛೇದನ ಕ್ರಿಯೆ. ಇದು ಧಾರ್ಮಿಕ ಹೆಸರಿನಲ್ಲಿ ಅವಳ ಪಾವಿತ್ರ್ಯತೆಯನ್ನು  ಸಾಬೀತು ಮಾಡುವ ಒಂದು ಅಮಾನವೀಯ ಕ್ರಿಯೆಯಾಗಿದೆ. ಪ್ರತಿಯೊಬ್ಬ ಮಹಿಳೆಯು ವಿವಾಹವಾಗಬೇಕಾದರೆ ಇದನ್ನು ಮಾಡಿಸಿಕೊಳ್ಳಲೇಬೇಕು. ಇದನ್ನು ಮಾಡಿಸಿಕೊಳ್ಳದ ಮಹಿಳೆಯನ್ನು ಅಪವಿತ್ರಳು, ವ್ಯಭಿಚಾರಿಣಿ ಎಂದು ಮದುವೆಯಾಗಲು ನಿರಾಕರಿಸುತ್ತಿದ್ದರು. ವಧುದಕ್ಷಿಣೆ ಪದ್ಧತಿ ಜಾರಿಯಲ್ಲಿರುವ ಇಲ್ಲಿ ಈ ಕ್ರಿಯೆಗೆ ಒಳಪಡುವ ಮಹಿಳೆಗೆ ಹೆಚ್ಚಿನ ಬೇಡಿಕೆ ಇರುತ್ತದೆ. 
ವಾರಿಸ್ ಳಿಗೂ ಐದನೇ ವರ್ಷದಲ್ಲಿಯೇ ಇದನ್ನು ಮಾಡಿಸಿದರು. ಈ ಕಾರಣದಿಂದಾಗಿಯೇ ಅವಳು ಮನೆ  ಬಿಡಬೇಕಾಯಿತು. ವಾರಿಸ್ ಳ ಅಪ್ಪ ಶ್ರೀಮಂತ ವೃದ್ಧನಿಂದ ಐದು ಒಂಟೆಗಳನ್ನು ವಧುದಕ್ಷಿಣೆಯಾಗಿ ತೆಗೆದುಕೊಂಡು ಅವನಿಗೆ ವಾರಿಸಳನ್ನು ಮದುವೆ ಮಾಡಿಕೊಡಲು ನಿಶ್ಚಯಿಸಿದನು. ಈ ಮದುವೆಯನ್ನು ಒಪ್ಪದ ವಾರಿಸ್ ತಾಯಿಯ ನೆರವಿನಿಂದ ಮನೆ ಬಿಟ್ಟು  ಹೊರ ನಡೆದಳು.
ಮರುಭೂಮಿಯಲ್ಲಿ ಸಾಗುತ್ತಿರುವಾಗ ಸಿಂಹದ ಬಾಯಿಂದ ಪಾರಾಗಿ, ಕಾಮುಕರಿಂದ ತಪ್ಪಿಸಿಕೊಂಡ ಇವಳನ್ನು ಗ್ಯಾಲ್ಕಯೋ ನಗರದ ಚಿಕ್ಕಪ್ಪನ ಮನೆ ತೋರಿಸುವ ನೆಪದಿಂದ ಅವಳ ಮೇಲೆ ಅತ್ಯಾಚಾರ ಮಾಡಲು ಪ್ರಯತ್ನಿಸಿದಾಗ ತಪ್ಪಿಸಿಕೊಂಡ ವಾರಿಸ್ ಹೇಗೊ ಚಿಕ್ಕಪ್ಪನ ಮನೆ ಸೇರಿದಳಾದರೂ ಅಲ್ಲಿಗು ಅಪ್ಪ ಬರುತ್ತಿರುವ ವಿಷಯ ತಿಳಿದು ಅಣ್ಣಂದಿರ ಸಹಾಯದಿಂದ ಮೊಗದಿಶು ನಗರದಲ್ಲಿರುವ ಅಕ್ಕನ ಮನೆಗೆ ಬಂದಳು. ಅಲ್ಲಿ ಕೇವಲ ಮೂರು ತಿಂಗಳಿದ್ದು ಅಕ್ಕನ ಮಾತುಗಳಿಂದ ಬೇಸರಗೊಂಡು ಮಾವನ ಮನೆಗೆ ಹೋದಳು. ಮಗಳ ಕಾರಣದಿಂದ ಅತ್ತೆ ಇವಳನ್ನು ಮನೆಯಿಂದ ಹೊರ ಹಾಕಿದಳು. ಮುಂದೆ ತನ್ನ ಚಿಕ್ಕಮ್ಮನ ಮನೆಗೆ ಬಂದ ವಾರಿಸಳನ್ನು ತನ್ನ ಮಕ್ಕಳಂತೆ ನೋಡಿಕೊಳ್ಳುತ್ತಿದ್ದಳು ಚಿಕ್ಕಮ್ಮ. ಹೀಗಿರುವಾಗ ಲಂಡನ್ ನಲ್ಲಿ ಸೋಮಾಲಿಯಾದ ರಾಯಭಾರಿಯಾಗಿದ್ದ ಮತ್ತೊಬ್ಬ ಚಿಕ್ಕಪ್ಪ, "ನಮ್ಮ ಮನೆಗೆ ಕೆಲಸದ ಹುಡುಗಿ ಬೇಕಾಗಿತ್ತು" ಎಂದು ಮಾತನಾಡುತ್ತಿದ್ದುದ್ದನ್ನು ಕೇಳಿದ ವಾರಿಸ್ ಅಲ್ಲಿಗೆ ಹೋಗಲು ನಿರ್ಧರಿಸಿ ಚಿಕ್ಕಮ್ಮನಿಗೆ ತಿಳಿಸಿ ಅವಳ ನೆರವಿನಿಂದ ಲಂಡನ್ ಗೆ ಹೋಗಲು ತಯಾರಾದಳು.
ಪ್ರಥಮ ಬಾರಿಗೆ ವಿಮಾನದ ಪ್ರಯಾಸದಿಂದ ಭಯವಾದರೂ ಗಗನಸಖಿಯ ನೆರವಿನಿಂದ ಧೈರ್ಯಗೊಂಡಳು.
ಲಂಡನ್ ಸೇರಿದ ವಾರಿಸ್ ಚಿಕ್ಕಮ್ಮನ ಮನೆಯಲ್ಲಿ ಪರಿಚಾರಿಕೆಯಾಗಿ ತನ್ನ ಹೊಸ ಜೀವನವನ್ನು ಪ್ರಾರಂಭಿಸಿದಳು. ಇಂಗ್ಲಿಷ್ ಭಾಷೆಯ ಅರಿವಿಲ್ಲದೆ ಕಾರಣ ಚಿಕ್ಕಮ್ಮಳ ಮಗಳಾದ ಬಸ್ಮಾಳಿಂದ ಅಲ್ಪಸ್ವಲ್ಪ ಕಲಿಯತೊಡಗಿದಳು ಮತ್ತು ರೂಪದರ್ಶಿ ಜಗತ್ತಿನ ಬಗ್ಗೆ ಆಸಕ್ತಿಯಿದ್ದ ವಾರಿಸ್ ಮನೆಗೆ ಬರುತ್ತಿದ್ದ ಪತ್ರಿಕೆಗಳ ಜಾಹೀರಾತುಗಳನ್ನು ನೋಡಿ ಆಕರ್ಷಿತಳಾಗುತ್ತಿದ್ದಳು. ಅಲ್ಲದೆ ರೂಪದರ್ಶಿಯಾಗಿದ್ದ ಚಿಕ್ಕಮ್ಮನ ಗೆಳತಿಯ ಮಗಳು ಇಮ್ರಾನ್ ಳನ್ನು ಕೇಳಿ ತಿಳಿದುಕೊಳ್ಳುತ್ತಿದ್ದಳು.
ಒಮ್ಮೆ ಚಿಕ್ಕಪ್ಪನ ತಂಗಿ ಮಗಳು ಸೋಫಿಯಾಳನ್ನು ಶಾಲೆಗೆ ಬಿಡುವಾಗ ಫೋಟೋಗ್ರಾಫರ್ ಇವಳನ್ನು "ನಾನೊಬ್ಬ ಫೋಟೋಗ್ರಾಫರ್, ನನಗೆ ಆಫ್ರಿಕನ್ ಹೆಣ್ಣುಮಕ್ಕಳ ಚಿತ್ರ ಬೇಕು" ಅಸಕ್ತಿಯಿದ್ದರೆ ಈ ವಿಳಾಸಕ್ಕೆ ಬರುವಂತೆ ತಿಳಿಸಿ ವಿಸಿಟಿಂಗ್ ಕಾರ್ಡ್ ಅನ್ನು ನೀಡಿದನು. ಅವಳು ಏನು ತೋಚದಂತಾಗಿ ಸುಮ್ಮನಾದಳು.
ಇದುವರೆವಿಗೂ ಚಿಕ್ಕಮ್ಮನ ಮನೆಯಲ್ಲಿ ನೆಮ್ಮದಿಯಿಂದ ಇದ್ದ ವಾರಿಸ್ ಳಿಗೆ ಮತ್ತೊಂದು ಸಮಸ್ಯೆ ಎದುರಾಯಿತು. ಚಿಕ್ಕಮ್ಮನ ಮಗ ಇವಳ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದನು. ಈ ಘಟನೆಯಿಂದ ನೊಂದ ವಾರಿಸ್ ಳಿಗೆ ನಾಗರಿಕ ಪ್ರಪಂಚದ ಬಗ್ಗೆ ಜಿಗುಪ್ಸೆ ಮೂಡಿತು.
ಹೀಗಿರುವಾಗಲೇ ಚಿಕ್ಕಪ್ಪನ ಕೆಲಸದ ಅವಧಿ ಮುಗಿದು ಅವರೆಲ್ಲರೂ ಸೋಮಾಲಿಯಾಕ್ಕೆ ವಾಪಸ್ಸಾಗಲು ತಯಾರಾದರು. ಆದರೆ ವಾರಿಸ್ ಕೈ ತುಂಬಾ ಹಣವನ್ನು ತೆಗೆದುಕೊಂಡು ಹಿಂದಿರುಗಬೇಕು ಎಂದುಕೊಂಡು ಲಂಡನ್ ನಲ್ಲಿಯೇ  ಉಳಿದುಕೊಂಡಳು. 
ನಂತರ ಹಾಲ್ವು ಎಂಬ ಆಫ್ರಿಕನ್ ಮಹಿಳೆಯ ಪರಿಚಯವಾಯಿತು.  ಇವಳಿಂದ ಲಂಡನ್ ನಲ್ಲಿ ಜೀವನ ನಡೆಸಲು ಬೇಕಾದ ಕನಿಷ್ಠ ಪಾಠಗಳನ್ನು ಕಲಿತಳು. ರೆಸ್ಟೊರೆಂಟ್ ನಲ್ಲಿ  ಕೆಲಸಕ್ಕೆ ಸೇರಿಕೊಂಡು ರಾತ್ರಿ ಶಾಲೆಗೆ ಸೇರಿ ಇಂಗ್ಲಿಷ್ ಅನ್ನು ಕಲಿಯತೊಡಗಿದಳು. ಪರಿಚಿತಳಾಗಿ ಬಂದ ಹಾಲ್ವು ಗೆಳತಿ, ಅಕ್ಕ, ತಾಯಿ ಮತ್ತು ಗುರು ಎಲ್ಲವೂ ಆಗಿ ಇವಳ ಬದುಕಿಗೆ ಒಂದು ದಾರಿ ತೋರಿಸಿದಳು. 
ಈ ಹಿಂದೆ ಭೇಟಿಯಾಗಿದ್ದ ಫೋಟೋಗ್ರಾಫರ್ ಮತ್ತೆ ವಾರಿಸ್ ಳನ್ನು ಭೇಟಿಯಾದನು. ಈ ಭೇಟಿಯು ಅವಳ ಜೀವನದ ದಿಕ್ಕನ್ನೇ ಬದಲಾಯಿಸಿತು. ಅವನ ಬಗ್ಗೆ ಗೆಳತಿಗೆ ಹೇಳಿದಾಗ ಅವಳು "ನೀನ್ಯಾಕೆ ರೂಪದರ್ಶಿಯಾಗಬಾರದು?" ಎಂದಳು. ನಂತರ ಗೆಳತಿಯೊಂದಿಗೆ ಫೋಟೋಗ್ರಾಫರ್ ನನ್ನು ಭೇಟಿ ಮಾಡಿ ರೂಪದರ್ಶಿಯಾಗಲು ಒಪ್ಪಿಗೆ  ನೀಡುವುದರ ಮೂಲಕ ಒಂದು ಹೊಸ ಜಗತ್ತಿಗೆ ಪಾದಾರ್ಪಣೆ  ಮಾಡಿದಳು.
ಸ್ಟುಡಿಯೋದಲ್ಲಿ ಇವಳ ಫೋಟೋ ನೋಡಿದ ಮಾಡಲಿಂಗ್ ಏಜನ್ಸಿಯ ಕ್ಯಾಲೆಂಡರ್ ಗೆ ರೂಪದರ್ಶಿಯಾಗಿ ಆಯ್ಕೆಯಾದಳು. ನಂತರ ಜೇಮ್ಸ್ ಬಾಂಡ್ ಸಿನಿಮಾದಲ್ಲಿ ನಟಿಸಿದಳು. ಹೀಗೆ ಒಂದೊಂದೆ ಮೆಟ್ಟಲೇರುತ್ತಾ ಮಾಡಲಿಂಗ್ ಪ್ರಪಂಚದಲ್ಲಿ ಪರಿಚಿತಳಾಗತೊಡಗಿದಳು.
ಸಿನಿಮಾದಲ್ಲಿ ಅಭಿನಯಿಸಿದ ನಂತರ ಇವಳ ಚಿತ್ರ The Sunday Times ನಲ್ಲಿ ಪ್ರಕಟವಾಯಿತು. ನಂತರ ಜಾಹೀರಾತು  ಕಂಪನಿಯು ಇವಳಿಗೆ ಆಹ್ವಾನ ನೀಡಿತು. ಪ್ಯಾರಿಸ್, ನ್ಯೂಯಾರ್ಕ್ ಮತ್ತು ಇಟಲಿಯಲ್ಲಿ ಕಪ್ಪು ಬಣ್ಣದ ರೂಪದರ್ಶಿಯರಿಗೆ ಹೆಚ್ಚಿನ ಬೇಡಿಕೆಯಿದೆ ಎಂದು ಇಂಗ್ಲೆಂಡ್ ನ ಪೌರತ್ವ ಪಡೆದು ಪಾಸ್ ಪೊರ್ಟ್ ಪಡೆಯಲು ವೃದ್ಧನೊಬ್ಬನನ್ನು ವಿವಾಹವಾದಳು. ಆದರೆ ಇಂಗ್ಲೆಂಡ್  ಸರ್ಕಾರ ಇದನ್ನು ಒಪ್ಪದೆ ಗಡಿಪಾರು ಮಾಡಲು ನಿರ್ಧರಿಸಿತು. ಇದಕ್ಕಾಗಿ ವಾರಿಸ್ ಗೆಳತಿಯ ತಮ್ಮನನ್ನು ನಾಟಕೀಯವಾಗಿ ಮದುವೆಯಾಗಿ ಶಾಶ್ವತ ಪಾಸ್ ಪೋರ್ಟ್ ಅನ್ನು ಪಡೆದು ಅಮೆರಿಕಾಗೆ ತೆರೆಳಿದಳು.  
ಅಲ್ಲಿ ನ್ಯೂಯಾರ್ಕ್ ನ ಬೂಕರ್ ಮಾಡೆಲಿಂಗ್ ಏಜನ್ಸಿಯೊಂದಿಗೆ ಒಂದು ವರ್ಷದ ಅವಧಿಯವರೆಗೆ ರೂಪದರ್ಶಿಯಾಗಿರಲು ಒಪ್ಪಂದ ಮಾಡಿಕೊಂಡಳು. ನಂತರ ಪ್ರಸಿದ್ಧ ಬಹುರಾಷ್ಟ್ರೀಯ ಕಂಪನಿಗಳ ಉತ್ಪನ್ನಗಳಿಗೆ ರೂಪದರ್ಶಿಯಾಗುವ ಅವಕಾಶ ದೊರೆಯಿತು. ಪ್ರಸಿದ್ಧ ಜೀನ್ಸ್ ಉಡುಪುಗಳಿಗೆ ರೂಪದರ್ಶಿಯಾಗುತ್ತಿದ್ದಂತೆ ಮಹಿಳೆಯರ ಸೌಂದರ್ಯ ಸಾಧನಗಳನ್ನು ತಯಾರಿಸುವ ರೆವಲಾನ್ ಕಂಪನಿಯಿಂದ ವಾರಿಸಳಿಗೆ ಬೇಡಿಕೆ ಬಂದಿತು. ಈ ಕಂಪನಿಯ ಜಾಹೀರಾತಿನ ಕಿರುಚಿತ್ರವೊಂದಕ್ಕೆ " ಅಮೆರಿಕಾದ ಅಕಾಡೆಮಿ ಪ್ರಶಸ್ತಿ "ಯೂ ದೊರೆಯಿತು.
ನಂತರ ವಾರಿಸ್ ಯೂರೋಪಿನಾದ್ಯಂತ ಬಹುಬೇಡಿಕೆಯ ರೂಪದರ್ಶಿಯಾದಳು. ಅಮೆರಿಕಾ ಅಲ್ಲದೆ ಇಟಲಿ ಮತ್ತು ಫ್ರಾನ್ಸ್ ನ ಫ್ಯಾಷನ್ ಉತ್ಸವಗಳಲ್ಲಿ ಭಾಗವಹಿಸುತ್ತಿದ್ದಳು.
1991-95 ರವರೆಗೆ ಯೂರೋಪಿನಾದ್ಯಂತ ವಾರಿಸ್ ಓಡಾಡಿದಳು. ಆನಂತರ ವಾರಿಸಳಿಗೆ ಬಿ.ಬಿ.ಸಿ ಛಾನಲ್ ರವರು "ನಿಮ್ಮ ಜೀವನವನ್ನು ಕುರಿತ ಸಾಕ್ಷ್ಯಚಿತ್ರವನ್ನು" ನಿರ್ಮಿಸುತ್ತೇವೆ ಎಂದು ಆಹ್ವಾನ ನೀಡಿದರು. ಆದರೆ ವಾರಿಸ್ "ನನ್ನನ್ನು ಸೋಮಾಲಿಯಾಕ್ಕೆ ಕರೆದುಕೊಂಡು ಹೋದರೆ ಮಾತ್ರ ನಾನು ಒಪ್ಪುವೆ" ಎಂದಳು. ವಾರಿಸ್ ಳನ್ನು ತಾಯ್ನಾಡಿಗೆ ಕರೆದುಕೊಂಡು ಹೋಗಿ ತಾಯಿಯನ್ನು ಭೇಟಿ ಮಾಡಿಸಿದರು. ಕಾಲ್ಮ್ ಬರೆದ ಇವಳ ಚಿತ್ರ ಕಥೆಯನ್ನು ಬಿಬಿಸಿ ನಿರ್ದೇಶಕ ಗೆರ್ರಿ ಪೊಮಿರೆ ನಿರ್ದೇಶನದಲ್ಲಿ ತಯಾರಾದ ಸಾಕ್ಷ್ಯ ಚಿತ್ರ 1995 ರಲ್ಲಿ "ನ್ಯೂಯಾರ್ಕ್ ನಲ್ಲಿ ಅಲೆಮಾರಿ" ಎಂಬ ಹೆಸರಿನಿಂದ ಬಿಡುಗಡೆಯಾಯಿತು.
ಆನಂತರ ಪಾಸ್ ಪೋರ್ಟ್ ಪತಿಗೆ ವಿಚ್ಛೇದನೆಯನ್ನು ನೀಡಿ ಡನ್ ನೊಡನೆ ಮದುವೆಯಾಗಿ ಗಂಡು ಮಗುವಿಗೆ ಜನ್ಮ ನೀಡಿದಳು. ಅಲೀಕ್ (ಸೋಮಾಲಿಯ ಭಾಷೆಯಲ್ಲಿ ಗಂಡು ಸಿಂಹ ) ಎಂದು ಹೆಸರಿಟ್ಟಳು.
ತಾಯಿಯಾದ ನಂತರ ತನ್ನ ಹಿಂದಿನ ಅನುಭವಗಳನ್ನು ನೆನೆಪಿಸಿಕೊಳ್ಳುತ್ತಾ " ತನ್ನ 5 ನೇ ವಯಸ್ಸಿನಲ್ಲಿ ತನಗೆ ಮಾಡಿದ ಗುಪ್ತಾಂಗ ಛೇಧನ, ಅದರಿಂದಾಗಿ ತಾನು ದಿನಾ ಮೂತ್ರ ವಿಸರ್ಜಿಸುವಾಗ ಅನುಭವಿಸುತ್ತಿದ್ದ ನೋವು ಮತ್ತು ತಿಂಗಳ ಮುಟ್ಟಿನ ಸಮಯದಲ್ಲಿ ಅನುಭವಿಸುತ್ತಿದ್ದ ಯಾತನೆಗಳು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಸರಿಪಡಿಸಿಕೊಂಡರೂ ಮರೆಯಲಾಗದೆ ಶಾಶ್ವತವಾಗಿ ಉಳಿದುಕೊಂಡಿವೆ" ಎಂದು ಹೇಳಿಕೊಂಡಿದ್ದಾಳೆ.
"ಮೇರಿಕ್ಲೈರ್" ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ವಾರಿಸ್ ಯಾವುದೇ ಭಾವನೆಗಳಿಲ್ಲದೆ "ತಾನು ಅಮಾನುಷ ಕ್ರಿಯೆಯಾದ ಗುಪ್ತಾಂಗ ಛೇಧನಕ್ಕೆ ಒಳಗಾಗಿರುವುದನ್ನು" ವಿವರಿಸಿದಳು. "ಹೆಣ್ಣೊಬ್ಬಳ ಗುಪ್ತಾಂಗ ಛೇಧನದ ದುರಂತ ಕಥೆ" ಎಂಬ ಶೀರ್ಷಿಕೆಯಿಂದ ಪ್ರಕಟಗೊಂಡಾಗ ಅಮೆರಿಕದ ನಾಗರಿಕ ಸಮಾಜ ಬೆಚ್ಚಿತು. ಕೆಲವರು ಇದನ್ನು ಟೀಕಿಸಿದರೆ ಹಲವರು ವಿರೋಧಿಸಿದರು. 1998 ರ ವೇಳೆಗೆ ಆಫ್ರಿಕಾದಲ್ಲಿ 13 ಕೋಟಿ ಹೆಣ್ಣುಮಕ್ಕಳು ಈ ಅಮಾನವೀಯ ಕ್ರಿಯೆಗೊಳಗಾಗಿದ್ದರು. ಹಾಗು ಅವೈಜ್ಞಾನಿಕವಾಗಿದ್ದ ಕಾರಣದಿಂದ ಸುಮಾರು 20 ಲಕ್ಷ ಹೆಣ್ಣುಮಕ್ಕಳು ಸಾವನ್ನಪ್ಪಿದರು.
ನಂತರ ಟಿವಿಯಲ್ಲಿ ಪ್ರಸಾರಗೊಂಡ ಈ ಸಂದರ್ಶನವನ್ನು ವೀಕ್ಷಿಸಿದ ವಿಶ್ವಸಂಸ್ಥೆಯ ಅಧಿಕಾರಿಗಳು ಆಫ್ರಿಕಾದಲ್ಲಿ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿದ್ದ ಗುಪ್ತಾಂಗ ಛೇಧನ ಕ್ರಿಯೆ ಕುರಿತು ಅರಿವು ಮೂಡಿಸುವ ಆಂದೋಲನದ ರಾಯಭಾರಿಯಾಗುವಂತೆ ವಾರಿಸ್ ಳನ್ನು ಕೇಳಿದರು.
ರಾಯಭಾರಿ ಪದವಿಯನ್ನು ಒಪ್ಪಿದ ವಾರಿಸ್ ಳಿಗೆ ಕೊಲೆಯ ಬೆದರಿಕೆಯೂ ಪ್ರಾರಂಭವಾಯಿತು. ಆದರೂ ಹೆದರದ ವಾರಿಸ್ ಇದರ ವಿರುದ್ಧ ಜಾಗೃತಿ ಮೂಡಿಸುತ್ತಾ ಡೆಸರ್ಟ್ ಫೌಂಡೇಷನ್ ಎಂಬ ಸಂಸ್ಥೆಯನ್ನು ಸ್ಥಾಪಿಸಿ, ತನ್ನ ಸಂದರ್ಶನ, ಲೇಖನ ಮೊದಲಾದವುಗಳಿಂದ ಬರುವ ಆದಾಯವನ್ನೆಲ್ಲಾ ಈ ಸಂಸ್ಥೆಗೆ ನೀಡುತ್ತಿದ್ದಾಳೆ. 
"ಸೋಮಾಲಿಯಾದಲ್ಲಿ ಹೆಣ್ಣುಮಕ್ಕಳಿಗೆ ಗುಪ್ತಾಂಗ ಛೇಧನ ಶಿಕ್ಷೆಯನ್ನು ನಿರ್ಬಂಧಿಸಲಾಗಿದೆ ಎಂಬ ಸುದ್ದಿಯನ್ನು ಕೇಳಬೇಕೆಂಬುದು, ಇಂತಹ ಸುದ್ದಿಯನ್ನು ಕೇಳಿದ ದಿನ ನನ್ನ ಹೋರಾಟ ಸಾರ್ಥಕ. ಇದೇ ನನ್ನ ಜೀವನದ ಕೊನೆಯ ಆಸೆ" ಎಂದು ತಿಳಿಸಿದ್ದಾಳೆ.
ಹೀಗೆ ಅಲೆಮಾರಿಯಾಗಿ ಮರಳುಗಾಡಿನಿಂದ ಓಡಿ ಬಂದು, ಸಿಂಹದ ಬಾಯಿಂದ ಪಾರಾಗಿ, ಮೊಗದಿಶು ನಗರ, ಇಂಗ್ಲೆಂಡ್, ಅಮೆರಿಕಾ ಫ್ರಾನ್ಸ್ ಎಲ್ಲಾ ಕಡೆ ಸುತ್ತಿ ಜಗತ್ಪ್ರಸಿದ್ಧವಾದ ರೂಪದರ್ಶಿಯಾದ ವಾರಿಸ್ ಳ ಜೀವನ ಸೋಜಿಗ ಮತ್ತು ವಿಸ್ಮಯವೇ ಸರಿ!!
-  ವಿಜಯಲಕ್ಷ್ಮಿ ಎಂ ಎಸ್      

Wednesday, 5 April 2017

ಪುಸ್ತಕ ವಿಮರ್ಶೆ - ಮಣ್ಣಿಂದ ಎದ್ದವರು

  [ಈ ಅಂಕಣದಲ್ಲಿ ನಾವು ಮಹಿಳೆಯರ ವಿಷಯಗಳಿಗೆ 
ಸಂಬಂಧಿಸಿದ ಪುಸ್ತಕಗಳ ವಿಮರ್ಶೆಗಳನ್ನು ಕೊಡುತ್ತಿದ್ದೇವೆ]


“ಮಣ್ಣಿಂದ ಎದ್ದವರು” ಕುಸುಮಾರವರ ಮೊದಲ ಕಾದಂಬರಿಯಾಗಿದ್ದು, ಇದನ್ನು ನವಕರ್ನಾಟಕ ಪ್ರಕಾಶನ ಸಂಸ್ಥೆ ಪ್ರಕಟಿಸಿದೆ.  
ಕುಸುಮಾ ಶಾನುಭಾಗರು ಬರಹಕ್ಕೆ ತೊಡಗುವ ಮುನ್ನ ಸ್ವಯಂಸೇವಾ ಕಾರ್ಯಕರ್ತೆಯಾಗಿದ್ದರೆಂದು, ಲೈಂಗಿಕ ಕಾರ್ಯಕರ್ತೆಯರ ಬದುಕಿನ ಬಗ್ಗೆ ಆಳವಾಗಿ ಅಧ್ಯಯನ ಮಾಡಿದರೆಂದು, ಆ ಸಮಯದಲ್ಲಿ ತಲೆಹಿಡುಕರು ಸಿಟ್ಟಿಗೆದ್ದು ಇವರನ್ನು ಎರಡನೇ ಮಹಡಿಯಿಂದ ಕೆಳಕ್ಕೆ ಎಸೆದಿದ್ದರೆಂದು, ಆದರೂ ಕುಸುಮಾರವರು ಧೃತಿಗೆಡದೆ ತಮ್ಮ ಅಧ್ಯಯನ ಮುಂದುವರೆಸಿದರೆಂದು, ಆ ಹೆಣ್ಣುಮಕ್ಕಳ ನರಕಸದೃಶ ಜೀವನವನ್ನು “ಕಾಯಕ ಕಾರ್ಪಣ್ಯ” ಎಂದು ಹೊರತಂದರೆಂದು ಈ ಕಾದಂಬರಿಗೆ ಮುನ್ನುಡಿಯನ್ನು ಬರೆದಿರುವ ಶ್ರೀ ಎಚ್ ಎಲ್ ಕೇಶವಮೂರ್ತಿಯವರು ಬರೆದಿದ್ದಾರೆ. 
ಕಥಾಹಂದರ 
ಪಾಲಂಗಾಲದ ದೇವರಭಟ್ಟರ ಮನೆತನದ ಸುಬ್ರಾಯಪ್ಪನಿಗೆ ಇಬ್ಬರು ಮಕ್ಕಳು ಶಿವಣ್ಣ ಮತ್ತು ವೆಂಕಪ್ಪಯ್ಯ. ಈ ವೆಂಕಪ್ಪಯ್ಯನ ಪತ್ನಿ ಸುಬ್ಬಮ್ಮ. ಚಿಕ್ಕಮಗನ ಮದುವೆಯಾದಾಗಲೇ ತಮ್ಮ ಆಸ್ತಿಯನ್ನು ಸಮಪಾಲು ಮಾಡಿದ್ದರು. ದೈರ್ಯಶಾಲಿಯಾದ ಚಿಕ್ಕ ಸೊಸೆಯನ್ನು ಕಂಡರೆ ಮಾವನಿಗೆ ಅತಿಯಾದ ಪ್ರೀತಿ. ಆದ್ದರಿಂದ ಅವಳಿಗೆ ಮನೆತನದ ಸೊತ್ತಾದ ಹವಳದ ಸರವನ್ನು ಕೊಟ್ಟರು. ವೆಂಕಪ್ಪಯ್ಯನಿಗೆ ಮಲೇರಿಯ ಜ್ವರ ಬಂದು ಅಸು ನೀಗಿದಾಗ ಸುಬ್ಬಮ್ಮ ಎದೆಗುಂದದೆ ತಾನೆ ಉಳುಮೆ ಮಾಡುವುದರಿಂದ ಹಿಡಿದು ವ್ಯವಸಾಯವನ್ನು ಮಾಡಲು ನಿಂತಳು. ಇದನ್ನು ನೋಡಿದ ಭಾವ ಶಿವಣ್ಣನು ಹೆಂಗಸರು ಮನೆಗೆಲಸ ಮಾಡಿಕೊಂಡು ಮನೆಯೊಳಗಿರಬೇಕು, ನಿನ್ನಿಂದ ಮನೆತನದ ಗೌರವ ಹಾಳಾಯಿತು ಎಂದು ಕಿರುಚಾಡಿದ. ನಂತರ ಗುರುಗಳನ್ನು ಮನೆಗೆ ಕರೆಯಿಸುವೆ ಭಿಕ್ಷೆಯನ್ನು ಹಾಕಬೇಕು ಎಂದು ಹೇಳುವ ಮೂಲಕ ಸುಬ್ಬಮ್ಮನಿಗೆ ಕೇಶಮುಂಡನ ಮಾಡಿಸಬಹುದೆಂದು ಲೆಕ್ಕ ಹಾಕಿದ ಶಿವಣ್ಣ. ಆದರೆ ಸುಬ್ಬಮ್ಮ ಮನೆಯನ್ನು ಬಿಟ್ಟು ಹೋಗುವೆ ಹೊರತು ಕೇಶಮುಂಡನ ಮಾಡಿಸಿಕೊಳ್ಳುವುದಿಲ್ಲ ಎಂದು ಮನೆಯನ್ನು ಬಿಟ್ಟು ಹೊರಬಂದಳು. ತನ್ನ ಭಾವ ಏನೆಲ್ಲಾ ತೊಂದರೆ ಕೊಟ್ಟರೂ ಹೆದರದೆ ಹೊರಬಂದ ಸುಬ್ಬಮ್ಮ ಚಿಕ್ಕ ಗುಡಿಸಲನ್ನು ಕಟ್ಟಿಕೊಂಡು ತನ್ನ ಗಂಡನ ಜಮೀನನ್ನು ಉಳಿಸಿಕೊಂಡು ಮಕ್ಕಳನ್ನು ಬೆಳೆಸಿದಳು. ಇವಳಿಗೆ ಇಬ್ಬರು ಮಕ್ಕಳು ಗೋಪಾಲಯ್ಯ ಮತ್ತು ಮಂಜಯ್ಯ. 
ಗೋಪಾಲಯ್ಯನಿಗೆ ಜಾನಕಿಯೊಡನೆ ವಿವಾಹ ಮಾಡಿದಳು. ಗೋಪಾಲಯ್ಯನಿಗೆ ಇಬ್ಬರು ಮಕ್ಕಳು ವಿಶ್ವನಾಥ ಮತ್ತು ಕಾವೇರಿ. ಎರಡನೆಯ ಮಗು ಹೆಣ್ಣಾದಾಗ ಗೋಪಾಲಯ್ಯನಿಗೆ ಸಂತೋಷವಾಯಿತು. ಏಕೆಂದರೆ ತಾನು ಆಸ್ತಿ ಭಾಗ ಮಾಡುವ ಸಮಸ್ಯೆ ತಪ್ಪಿತು, ಪೂರಾ ಆಸ್ತಿ ಮಗ ವಿಶ್ವನಾಥನಿಗೆ ಸೇರುತ್ತದೆ ಎಂದು. ಇಲ್ಲಿ ಗೋಪಾಲಯ್ಯನಿಗೆ ಹಿಂದೆ ತನ್ನ ತಾಯಿಯ ಪರಿಶ್ರಮದಿಂದ ತಾನು ಈ ಮಟ್ಟದಲ್ಲಿದ್ದೇನೆ ಎಂಬುದು ತಿಳಿಯಲಿಲ್ಲ.  
ಕಾವೇರಿ ಅಣ್ಣನೊಂದಿಗೆ ನಾಲ್ಕನೆಯ ತರಗತಿಯವರೆಗೆ ಓದಿದಳು. ನಂತರ ಓದಲು ಇಷ್ಟವಿದ್ದರೂ ಅಪ್ಪನ ಮಾತಿನಂತೆ ಮನೆಯಲೇ ಉಳಿದಳು. ತಾಯಿಗೆ ಯಾವಾಗಲೂ ಹುಷಾರಿಲ್ಲದ ಕಾರಣ ಅಜ್ಜಿಯ ಸಲಹೆಯಂತೆ ಮನೆಗೆಲಸ ಮತ್ತು ಅಡುಗೆ ಮಾಡುವುದನ್ನು ಕಲಿತಳು. ಹದಿನೈದು ವಯಸ್ಸು ದಾಟುತ್ತಿದ್ದಂತೆಯೆ ಅಜ್ಜಿ ಮದುವೆ ಮಾಡುವಂತೆ ಮಗನಿಗೆ ಹೇಳಿದಳು. ಆದರೆ ಮಗ ಗೋಪಾಲಯ್ಯ ಸ್ವಾರ್ಥದಿಂದ ಮಗಳ ಜಾತಕದಲ್ಲಿ ಮದುವೆ ಯೋಗವಿಲ್ಲವೆಂದು ಸುಳ್ಳು ಹೇಳಿದನು. ಆಜ್ಜಿಯ ಸಾವಿನ ನಂತರ ಕಾವೇರಿ ಒಂಟಿಯಾದಳು. ತಂದೆ ಮತ್ತು ಅಣ್ಣನ ನಡೆವಳಿಕೆಯಿಂದ ಬೇಸರಗೊಡ ಕಾವೇರಿ ತಾನು ಸ್ವತಂತ್ರವಾಗಿರಲು ಯೋಚಿಸಿ ತಂದೆಯನ್ನು ಆಸ್ತಿಯಲ್ಲಿ ಪಾಲು ಕೊಡಿಯೆಂದು ಕೇಳಿದಳು. ತಂದೆ “ಗಂಡುಮಕ್ಕಳಿಗೆ ಮಾತ್ರ ಆಸ್ತಿಯಲ್ಲಿ ಪಾಲು ಕೊಡುವುದು ನಿನಗೇಕೆ?”ಎಂದನು. ನೀವೇನು ನನಗೆ ಸಮಪಾಲು ಕೊಡಬೇಡಿ, ಜೀವನ ನಡೆಸಲು ಎಷ್ಟು ಬೇಕೋ ಅಷ್ಟು ಕೊಡಿ ಎಂದಳು. 
ತಂದೆ ಮತ್ತು ಅಣ್ಣನ ನಡೆವಳಿಕೆಯಿಂದ ಬೇಸರಗೊಂಡ ಕಾವೇರಿ ಕೊನೆಗೆ ವಕೀಲರ ಸಹಾಯದಿಂದ  ಮನೆಯವರ ವಿರೋಧದ ನಡುವೆಯೂ ಪಾಲು ತೆಗೆದುಕೊಂಡು ಮನೆಯಿಂದ ಹೊರ ಬಂದಳು. ಹೊರ ಬಂದು ವ್ಯವಸಾಯ ಮಾಡಿಕೊಂಡು ಸ್ವತಂತ್ರವಾಗಿದ್ದರೂ ಅಣ್ಣನ ಸಂಚಿನಿಂದ ಕೋರ್ಟಿಗೆ ಅಲೆದಾಡಿ ವ್ಯಾಜ್ಯದಲ್ಲಿ ಜಯಗಳಿಸಿದಳು. 
ಹೀಗೆ ಒಂಟಿಯಾಗಿ ಜೀವನ ಸಾಗಿಸುತ್ತಿರಬೇಕಾದರೆ ಪಕ್ಕದ ತೋಟದಲ್ಲಿದ್ದವನು ಕಾವೇರಿಯನ್ನು ಹಿಡಿಯಲು ಬಂದು, ಅವಳು ಕಿರುಚಿಕೊಂಡಾಗ, ಕಾವೇರಿಯ ಕರೆದಳು ಎಂದು ಹೇಳಿದನು. ಆಗ ಕಾವೇರಿ ವಿವಾಹದ ಬಗ್ಗೆ ಆಲೋಚಿಸಿ, ಜಾಹೀರಾತು ನೀಡಿದಳು; ಬಂದ ನಾರಾಯಣನನ್ನು ಏನನ್ನು ವಿಚಾರಿಸದೆ ಮದುವೆ ಮಾಡಿಕೊಂಡಳು. ನಂತರ ಅವನೊಬ್ಬ ಕಳ್ಳ ಹಾಗೂ ಅವನಿಗೆ ಇದು ಐದನೇ ಮದುವೆ ಎಂದು ತಿಳಿಯಿತು. ಆದರೆ ಅದನ್ನು ಬಹಳ ಸಮರ್ಥವಾಗಿ ಎದುರಿಸುತ್ತಾಳೆ. 
ಇನ್ನು ಗೋಪಾಲಯ್ಯನ ಅಣ್ಣನ ಮನೆಯಲ್ಲು ಹೆಣ್ಣುಮಕ್ಕಳು ಜೋರಾಗಿ ಮಾತನಾಡುವಂತಿರಲಿಲ್ಲ. ಗಂಡ ಮತ್ತು ಮಗನ ಬಲವಂತದಿಂದ ಶೈಲಜಾ ತಂದೆಯಂತಿದ್ದ ಭಾವನ ಮೇಲೆ ಅಪವಾದ ಹೊರಿಸಬೇಕಾಯಿತು.
ಹೀಗೆ ಶ್ರೀಮಂತರಾಗಲೀ, ಬಡವರಾಗಲಿ ಎಲ್ಲಾ ಕಡೆಯೂ ಹೆಣ್ಣಿನ ಮೇಲೆ ಶೋಷಣೆ ನಡೆಯುತ್ತಲೇಯಿದೆ. ಹೊರಗಾಗಲಿ ಅಥವಾ ಮನೆಯಲ್ಲಾಗಲಿ ಅದು ನಿರಂತರವಾಗಿ ನಡೆಯುತ್ತಲೇಯಿದೆ. ಕಾವೇರಿಯ ಮಾತಿನಲ್ಲೇ ಹೇಳುವುದಾದರೆ “ಅಜ್ಜಿ ಆಗ ಅನುಭವಿಸಿದ್ದ ಕಷ್ಟಕ್ಕೂ ಈಗ ನಾನು ಅನುಭವಿಸುತ್ತಿರುವ ಕಷ್ಟಕ್ಕೂ ವ್ಯತ್ಯಾಸವುಂಟೆ? ಇಲ್ಲವೇ ಇಲ್ಲ ಒಂದೇ ರೀತಿ ಯಾಕೆ ಹೇಳು? ಹೆಂಗಸು ಹೇಳದೇ ಇರುವುದು ಕಾರಣ. ನಮ್ಮ ಜನರು ಮಣ್ಣಿನ ಅಧಿಕಾರವನ್ನು ಹೆಣ್ಣಿಗೆ ಕೊಡುವುದಿಲ್ಲ, ಅವಳಾಗಿ ತೆಗೆದುಕೊಂಡರೆ ಒಪ್ಪಿಕೊಳ್ಳೋಕೂ ತಯಾರಿಲ್ಲ. ಅವಳಿಗೆ ಸ್ವಂತಿಕೆ ಇದ್ರೆ ಉಸಿರು ಉಸಿರಿಗೂ ಹೋರಾಡಬೇಕು” ಎಂದು ಹೇಳಿರುವ ಮಾತಿನಲ್ಲಿ ಇಡೀ ಕಥೆಯ ಸಾರಂಶವಿದೆ
ಕುಸುಮಾ ಶಾನುಭಾಗರವರು 
ಹೀಗೆ ಕಾದಂಬರಿಗಾರ್ತಿ ಕುಸುಮ ಶಾನುಭಾಗರವರು ಹೆಣ್ಣಿನ ಶೋಷಣೆಯ ವಿವಿಧ ಆಯಾಮಗಳನ್ನು ತಿಳಿಸಿದ್ದಾರೆ. ಪತ್ರಕರ್ತೆ ಮತ್ತು ಸ್ವಯಂಸೇವಾ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಇವರು ಪುರುಷಪ್ರಧಾನ ಸಮಾಜದಲ್ಲಿ ಮಹಿಳೆಯರು ಅನುಭವಿಸಿರುವ ನೋವು, ಹಿಂಸೆಗಳನ್ನು ಮನಮುಟ್ಟುವಂತೆ ಬರೆದಿದ್ದಾರೆ.  

- ವಿಜಯಲಕ್ಷ್ಮಿ ಎಂ ಎಸ್  

Tuesday, 7 March 2017

ಮಹಿಳಾ ಸಾಧಕಿಯರು - 1- ಅಂತರರಾಷ್ಟ್ರೀಯ ಮಹಿಳಾ ದಿನದ ರೂವಾರಿ - ಕ್ಲಾರಾ ಜೆಟ್ಕಿನ್


ಮಾರ್ಚ್ ತಿಂಗಳು ಬಂದಿತೆಂದರೆ ಸಾಕು ಮಹಿಳೆಯರಿಗೆ ಏನೋ ಸಂಭ್ರಮ. ಮಾರ್ಚ್ ರಂದು ವಿಶ್ವದಾದ್ಯಂತ  ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸುತ್ತೇವೆ. ಆದರೆ ಇದರ ಹಿಂದೆ ಎಷ್ಟೋ ಜನರ ಹೋರಾಟಶ್ರಮವಿದೆ ಎಂಬುವುದರಲ್ಲಿ ಎರಡು ಮಾತಿಲ್ಲ. ಅದರಲ್ಲಿ ಪ್ರಮುಖರಾದವರು ಕ್ಲಾರಾ ಜೆಟ್ಕಿನ್ ರವರು.
  ಮಹಿಳಾ ಹೋರಾಟಗಾರ್ತಿಸಮಾಜವಾದಿ ಚಿಂತಕಿ ಕ್ಲಾರಾರವರು 1857 ಜುಲೈ 5 ರಂದು ಮಧ್ಯಮ ವರ್ಗದ  ಗಾಟ್‌ಫ್ರಿಡ್ ಐಸೆನರ್ ಮತ್ತು ಜೋಸೆಫಿನ್ ವೀಟೆಲ್ ಐಸೆನರ್ ರವರ ಮೊದಲನೆ ಮಗಳಾಗಿ ಜರ್ಮನಿಯಲ್ಲಿ ಜನಿಸಿದರು. ತಂದೆ ತಾಯಿ ಇಬ್ಬರು ಶಿಕ್ಷಕರಾಗಿದ್ದರು. ಕ್ಲಾರಾರವರು ತಂದೆ ಬೋಧಿಸುತ್ತಿದ್ದ ಶಾಲೆಯಲ್ಲಿ  ತಮ್ಮ ಶಿಕ್ಷಣವನ್ನು ಪ್ರಾರಂಭಿಸಿದರು. ತಂದೆಯ ನಿವೃತ್ತಿ ನಂತರ ಪಟ್ಟಣಕ್ಕೆ ಬಂದು ನೆಲೆಸಿದರು. ನಂತರ ಇವರು ಸಾಹಿತ್ಯ ಮತ್ತು  ಇತಿಹಾಸದಲ್ಲಿ ಪದವಿ ಮುಗಿಸಿದರು. ಇವರು ಶಿಕ್ಷಕಿಯಾಗಿರುವಾಗ ವುಮೆನ್ಸ್ ಎಜುಕೇಶನ್ ಸೊಸೈಟಿ ಮತ್ತು ನ್ಯಾಷನಲ್ ಅಸೋಸಿಯೇಷನ್ ಆಫ್ ಜರ್ಮನ್ ವುಮೆನ್ ನಡೆಸುತ್ತಿದ್ದ ಸಭೆಗಳಲ್ಲಿ ಭಾಗವಹಿಸುತ್ತಿದ್ದರು 
  1878ರಲ್ಲಿ ರಷ್ಯಾದ ವಿದ್ಯಾರ್ಥಿಗಳ ಪರಿಚಯವಾಗಿ ಇವರು "ಸಾಮಾಜಿಕ ಕಾರ್ಮಿಕ ಪಕ್ಷಕ್ಕೆ" ಸೇರಿದರು. 1878 ರಲ್ಲಿ ಜರ್ಮನಿಯಲ್ಲಿ ಬಿಸ್ಮಾರ್ಕ್ ಸಾಮಾಜಿಕ ಚಟುವಟಿಕೆಗಳನ್ನು ನಿಷೇಧಿಸಿದ್ದರಿಂದ ಕ್ಲಾರಾರವರನ್ನು ಪ್ಯಾರಿಸ್ ಗೆ ಗಡಿಪಾರು ಮಾಡಲಾಯಿತು. ಈ ಸಮಯದಲ್ಲಿ ಪರಿಚಯವಾದ ಮಾರ್ಕ್ಸ್ ವಾದಿ ಆಸಿಫ್ ಜೆಟ್ಕಿನ್ ಇವರಿಗೆ ಮಾರ್ಕ್ಸ್ ರವರ ಸಿದ್ಧಾಂತಗಳನ್ನು ತಿಳಿಸಿಕೊಟ್ಟರು.  ನಂತರ ಕ್ಲಾರಾರವರು ಆಸಿಫ್ ಜೆಟ್ಕಿನ್ ರವರನ್ನು ವಿವಾಹವಾಗಿ ಜೆಟ್ಕಿನ್ ಎಂಬ ಹೆಸರನ್ನು ಸೇರಿಸಿಕೊಂಡರು.
ಕ್ಲಾರಾರವರು ಕಾನ್ಸ್ಟೆಂಟಿನ್ ಮತ್ತು  ಮ್ಯಾಕ್ಸಿಮ್ ಎಂಬ ಎರಡು ಮಕ್ಕಳ ತಾಯಿಯಾದರು. 1889 ರಲ್ಲಿ ಆಸಿಫ್ ಜೆಟ್ಕಿನ್ ರವರು ಮರಣ ಹೊಂದಿದರು.
  ಪ್ಯಾರಿಸ್ ನಲ್ಲಿ ಇದ್ದ ಸಮಯದಲ್ಲಿ ಕ್ಲಾರಾರವರು ಅಂತರರಾಷ್ಟ್ರೀಯ ಸಮಾಜವಾದಿ ಗುಂಪಿನ ಸಂಘಟನೆಯಲ್ಲಿ ಬಹು ಮುಖ್ಯ ಪಾತ್ರ ವಹಿಸಿದರು. ಆ ಸಮಯದಲ್ಲಿ ಮಹಿಳೆಯರ ಸ್ಥಿತಿ  ತುಂಬಾ ಶೋಚನೀಯವಾಗಿತ್ತು. ಹೆಣ್ಣು ಗಂಡೆಂಬ ತಾರತಮ್ಯ ನೀತಿಯಿಂದ ಮಹಿಳೆಯರಿಗೆ ಕೆಲಸ ಸಿಗುತ್ತಿರಲಿಲ್ಲ. ಮಹಿಳೆಯರಿಗೆ ಸರಿಯಾದ ವೇತನವನ್ನು ನೀಡುತ್ತಿರಲಿಲ್ಲ ಮತ್ತು ಅವರಿಗೆ ಮತ ಚಲಾಯಿಸುವ ಹಕ್ಕು ಇರಲಿಲ್ಲ. ಇಂತಹ ಸಂದರ್ಭದಲ್ಲಿ  ಮಹಿಳೆಯರಿಗೆ ರಾಜಕೀಯವಾಗಿಆರ್ಥಿಕವಾಗಿ ಸಮಾನ ಅವಕಾಶಗಳು ಮತ್ತು  ಮತ ಚಲಾಯಿಸುವ ಹಕ್ಕು  ದೊರೆಯುವಂತೆ ನಡೆಸಿದ ಹೋರಾಟದಲ್ಲಿ ಕ್ಲಾರಾರವರ ಪಾತ್ರ ಗಣನೀಯವಾದದು.
1891 ರಿಂದ 1928 ರವರೆಗಿನ ಸಾಮಾಜಿಕ ಪ್ರಜಾಸತ್ತಾತ್ಮಕ ಮಹಿಳೆಯರ ಹೋರಾಟದಲ್ಲಿ  ಬಹಳ ಶ್ರಮಿಸಿದರು. ಇದೇ ಸಮಯದಲ್ಲಿ "equality "ಪತ್ರಿಕೆಯ ಸಂಪಾದಕಿಯಾಗಿಯೂ ಕೆಲಸ ನಿರ್ವಹಿಸಿದ್ದರು. 
1908 ರ ಅಮೆರಿಕದ ಮತದಾನದ ಹಕ್ಕಿಗಾಗಿ ನಡೆದ ಹೋರಾಟದಿಂದ ಸ್ಪೂರ್ತಿಗೊಂಡ ಕ್ಲಾರಾರವರು 1910ರ ಆಗಸ್ಟ್ ನಲ್ಲಿ ಕೊಪನ್ ಹೇಗ್ ನಲ್ಲಿ  ಪ್ರಥಮ ಅಂತರರಾಷ್ಟ್ರೀಯ ಸಮಾಜವಾದಿ  ಮಹಿಳಾ ಸಮಾವೇಶ ದಲ್ಲಿ  ವರ್ಷಕ್ಕೊಂದು ದಿನವನ್ನು ಮಹಿಳೆಯರ ದಿನವಾಗಿ ನಿಗದಿಪಡಿಸಿ ಆಚರಿಸುವಂತೆ ಪ್ರಸ್ತಾಪ ಮಾಡಿದರು.
 ಇದನ್ನು 17 ರಾಷ್ಟ್ರದ 100 ಪ್ರತಿನಿಧಿಗಳು ಅನುಮೋದಿಸಿದರು. ಈ ಎಲ್ಲಾ ಬೆಳವಣಿಗೆಯ ಫಲವಾಗಿ 1911 ರಲ್ಲಿ ಪ್ರಥಮ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು.
  ಪ್ರಥಮ ಜಾಗತಿಕ ಯುದ್ಧದ ಸಮಯದಲ್ಲಿ ಕ್ಲಾರಾರೋಸಾ ಲುಕ್ಸೆಂಬರ್ಗ್ ಮೊದಲಾದವರು ಪಕ್ಷದ ಸಿದ್ಧಾಂತಗಳನ್ನು ಮೀರಿ ಅಂತರರಾಷ್ಟ್ರೀಯ ಯುದ್ಧ ವಿರೋಧಿ ಸಮ್ಮೇಳನವನ್ನು 1915 ರಲ್ಲಿ ಬರ್ಲಿನ್ ನಲ್ಲಿ ಸಂಘಟಿಸಿದರು. ಈ ಯುದ್ಧ ವಿರೋಧಿ ಚಟುವಟಿಕೆಗಳಿಂದ ಕ್ಲಾರಾರವರನ್ನು ಹಲವಾರು ಬಾರಿ ಬಂಧಿಸಲಾಯಿತು. 1916 ರಲ್ಲಿ ಇವರನ್ನು "ಗೃಹಬಂಧನ" ದಲ್ಲಿರಿಸಲಾಯಿತು ಆದರೆ ಅವರ ಆರೋಗ್ಯದ ಸಮಸ್ಯೆಯಿಂದ ಬಿಡುಗಡೆ ಮಾಡಲಾಯಿತು. 1916ರಲ್ಲಿ ಸ್ಥಾಪನೆಯಾದ ಇಂಡಿಪೆಂಡೆಂಟ್ ಸೋಷಿಯಲಿಸ್ಟ್  ಡೆಮಾಕ್ರೆಟಿಕ್ ಪಾರ್ಟಿ ಸ್ಥಾಪಕರಲ್ಲಿ ಇವರು ಒಬ್ಬರು. ಜರ್ಮನಿಯ ಕ್ರಾಂತಿಯ ಸಮಯದಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಜರ್ಮನಿ  ಪ್ರಾರಂಭವಾಯಿತು. ಕ್ಲಾರಾರವರು ಇದರ ಸದಸ್ಯತ್ವವನ್ನು ಪಡೆದರು. 1920 ರಿಂದ 1933 ರವರೆಗೆ ಪ್ರತಿನಿಧಿಯಾಗಿ ಪಕ್ಷವನ್ನು ಮುನ್ನೆಡೆಸಿದರು. 1920 ರಲ್ಲಿ  "ಮಹಿಳೆಯರ ಪ್ರಶ್ನೆ"(The women question) ಎಂಬ ವಿಷಯದ ಬಗ್ಗೆ ಲೆನಿನ್ ರವರನ್ನು ಸಂದರ್ಶಿಸಿದರು.
  1924ರವರೆಗೆ ಇವರು K.P.D.ಯ ಕೇಂದ್ರ ಸಮಿತಿಯ ಸದಸ್ಯರಾಗಿದ್ದರು. 1921ರಿಂದ 1933ರವರೆಗೆ ಇವರು ಕಮ್ಯುನಿಸ್ಟ್  ಇಂಟರ್ ನ್ಯಾಷನಲ್  ನ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದರು.1925 ರಲ್ಲಿ ಜರ್ಮನ್ ಲೆಫ್ಟ್ ವಿಂಗ್ ಸಾಲಿಡಾರಿಟಿ ಆರ್ಗನೈಸೇಷನ್ ನ ಅಧ್ಯಕ್ಷರಾಗಿ ಆಯ್ಕೆಯಾದರು. 1932 ರಲ್ಲಿ ರೀಚ್ಸ್ಟಾಗ್ ನ ಅಧ್ಯಕ್ಷರಾಗಿದ್ದರು.
1933 ರಲ್ಲಿ ಹಿಟ್ಲರ್ ಮತ್ತು ನಾಜಿ ಪಕ್ಷದವರು ಸಮತಾವಾದಿ ಪಕ್ಷವನ್ನು ನಿಷೇಧಿಸಿದರು. ಪರಿಣಾಮವಾಗಿ ಕ್ಲಾರಾರವರನ್ನು ಗಡಿಪಾರು  ಮಾಡಲಾಯಿತು. ರಷ್ಯಾಕ್ಕೆ ತೆರಳಿದ ಕ್ಲಾರಾರವರು ತಮ್ಮ 76ನೇ  ವಯಸ್ಸಿನಲ್ಲಿ ನಿಧನರಾದರು. ಇವರನ್ನು "Grandmother of communism" (ಸಮತಾವಾದದ ಅಜ್ಜಿ) ಎಂದು ಗೌರವಿಸಲಾಗಿದೆ.
  1949ರ ನಂತರ ಕ್ಲಾರವರ ಹೆಸರು ಎಲ್ಲಾ ಕಡೆ ಪ್ರಸಿದ್ಧಿಯಾಯಿತು. ಜರ್ಮನಿಯ ಪ್ರಮುಖ ಪಟ್ಟಣಗಳ ರಸ್ತೆಗಳಿಗೆ ಇವರ ಹೆಸರನ್ನಿಡಲಾಯಿತು.
1954 ರಲ್ಲಿ ಕ್ಲಾರಾರವರ ಚಿತ್ರವಿರುವ ಪದಕವನ್ನು  ಹೊರತಂದರು.
1967 ರಲ್ಲಿ  ಕ್ಲಾರಾ ಜೆಟ್ಕಿನ್ ರವರ ಪ್ರತಿಮೆಯನ್ನು ಅನಾವರಣಗೊಳಿಸಿದರು.
1987 ರಲ್ಲಿ ಇವರ ಚಿತ್ರವಿರುವ ಅಂಚೆಚೀಟಿ ಮುದ್ರಿಸಿದರು.
  ಕ್ಲಾರಾ ಜೆಟ್ಕಿನ್ ರಂತೆ ಮಹಿಳೆಯರ ಸಮಾನತೆಗೆ ಎಲ್ಲರೂ ಶ್ರಮಿಸಿದಾಗ ಮಾತ್ರ ಅವರ ಪರಿಕಲ್ಪನೆಯ "ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ"ಗೆ ನಿಜವಾದ ಅರ್ಥ ದೊರೆಯುವುದು.
     -  ವಿಜಯಲಕ್ಷ್ಮಿ ಎಂ ಎಸ್ 

ಮಹಿಳಾ ಇತಿಹಾಸ - ೧ - ಅಂತರರಾಷ್ಟ್ರೀಯ ಮಹಿಳಾ ದಿನದ ಇತಿಹಾಸ





"ಸಮಾಜ ಮಹಿಳೆಯರ ಮುಕ್ತ ಬೆಳವಣಿಗೆಯನ್ನು ಒಪ್ಪಿಕೊಳ್ಳದಿದ್ದರೆ ಆ ಸಮಾಜವನ್ನು ಪುನರ್ ರಚಿಸಬೇಕು" ಎಂದು ಆಧುನಿಕ ಯುಗದ ಪ್ರಥಮ ಮಹಿಳಾ ವೈದ್ಯೆ ಎಲಿಜಬೆತ್ ಬ್ಲಾಕ್ವೆಲ್ ಹೇಳಿರುವುದು ಅಕ್ಷರಶಃ ಸತ್ಯವಾದುದು. ಈ ನಿಟ್ಟಿನಲ್ಲಿ ಮಹಿಳೆಯರ ಮುಕ್ತ ಬೆಳವಣಿಗೆಯನ್ನು ಒಪ್ಪದ ಸಮಾಜವನ್ನು ಬದಲಿಸುವ ಪ್ರಯತ್ನ ಹಿಂದಿನಿಂದಲೂ ನಡೆಯುತ್ತಲೇ ಬಂದಿದೆ. ಈಗಲೂ ಸಹ ನಡೆಯುತ್ತಿದೆ. ಮಹಿಳೆ ಏನೆಲ್ಲಾ ಸಾಧನೆ ಮಾಡಿದರು ಎಷ್ಟೇ  ಮೇಲಿನ ಸ್ಥಾನಕ್ಕೇರಿದರೂ ಒಂದಲ್ಲ ಒಂದು ರೀತಿ ಶೋಷಣೆಗೊಳಗಾಗುತ್ತಲೇ ಇದ್ದಾಳೆ. ಈ ರೀತಿ ಶೋಷಣೆಗೊಂಡ ಮಹಿಳೆಯರ ಅವಿರತ ಹೋರಾಟದಿಂದ ಜನ್ಮ ತಾಳಿ ಬಂದುದೆ ಈ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ. ಮಾರ್ಚ್ 8 ರಂದು ಈ ದಿನವನ್ನು ಆಚರಿಸಲಾಗುತ್ತದೆ. "ಮಹಿಳೆಯರ ಸರ್ವತೋಮುಖ ಅಭಿವೃದ್ಧಿಯೇ" ಇದರ ಮೂಲ ಉದ್ದೇಶ.


  ಈ ಮಹಿಳಾ ಹೋರಾಟವು ತನ್ನದೇ ಆದ ಇತಿಹಾಸವನ್ನು ಹೊಂದಿದೆ. 1789 ರ ಫ್ರೆಂಚ್ ಕ್ರಾಂತಿಯ ಸಮಯದಲ್ಲಿ ಪರ್ಷಿಯನ್  ಮಹಿಳೆಯರು "ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಮತ್ತು ಮತಚಲಾವಣೆಗಾಗಿ ಮೆರವಣಿಗೆಯನ್ನು ಮಾಡಿದರು.
1792 – ಮೇರಿ ವೋಲ್ಸ್‍ಟನ್‍ಕ್ರಾಫ್ಟ್ "ಮಹಿಳಾ ಹಕ್ಕುಗಳ ಪುರಾವೆ"ಯನ್ನು  ರಚಿಸಿದರು.


"ಸ್ತ್ರೀಯರು ಪುರುಷರಿಗಿಂತ ಯಾವುದೇ ರೀತಿಯಲ್ಲಿ ಕೀಳಲ್ಲ; ಹಾಗಾಗಿ ಸಮಾನ ಹಕ್ಕುಗಳನ್ನು ನೀಡಬೇಕು. ಶಿಕ್ಷಣದ ಮೂಲಕ ಸ್ತ್ರೀಯರ ಮನಸ್ಸು ಸದೃಢ ಮತ್ತು ವಿಸ್ತಾರಗೊಳ್ಳುತ್ತದೆ; ಆ ಮೂಲಕ ಕುರುಡು ವಿಧೇಯತೆ ಕೊನೆಯಾಗುತ್ತದೆ. ಸ್ತ್ರೀಯರು ಪುರುಷರ ಮೇಲೆ ಅಧಿಕಾರ ಹೊಂದಿರಬೇಕೆಂದು ನಾನು ಇಚ್ಛಿಸುವುದಿಲ್ಲ; ತಮ್ಮ ಮೇಲೆ ತಾವು ಅಧಿಕಾರ ಹೊಂದಿರಬೇಕು. ನಮಗೆ ಬೇಕಿರುವುದು ನ್ಯಾಯ, ಭಿಕ್ಷೆಯಲ್ಲ!!" ಎಂದು ಘಂಟಾಘೋಷವಾಗಿ ಸಾರಿದರು. 
   1848 ರಲ್ಲಿ ನಡೆದ ಸಮಾವೇಶದಲ್ಲಿ ಎಲಿಜಬೆತ್ ಕ್ಯಾಡಿ ಸ್ಟಾನ್ಟನ್ ಮತ್ತು ಲುಕ್ರೆಷಿಯ ಮೋಟ್ ರವರು ಪುರುಷ ಮತ್ತು ಮಹಿಳೆಯರನ್ನು ಸಮಾನ ದೃಷ್ಟಿಯಲ್ಲಿ  ಕಾಣಬೇಕೆಂದು ವಾದಿಸಿದರು.
  ನ್ಯೂಯಾರ್ಕ್ನ ಬಟ್ಟೆ ಕಾರ್ಖಾನೆಯಲ್ಲಿ ದುಡಿಯುತ್ತಿದ್ದ ಮಹಿಳೆಯರ ಸ್ಥಿತಿ  ಶೋಚನೀಯವಾಗಿತ್ತು. ಅಲ್ಲಿ ಅವರ ಶ್ರಮಕ್ಕೆ ತಕ್ಕಂತೆ ವೇತನ ನೀಡುತ್ತಿರಲಿಲ್ಲ. ದುಡಿಯುವ ಅವಧಿಯು ಹೆಚ್ಚಾಗಿತ್ತು. ಇದರಿಂದ ಬೇಸತ್ತ ಮಹಿಳೆಯರು ದುಡಿಯುವ ಅವಧಿಯನ್ನು ಕಡಿಮೆ ಮಾಡಿ, ಶ್ರಮಕ್ಕೆ ತಕ್ಕಂತೆ ವೇತನವನ್ನು ನೀಡುವಂತೆ ಮತ್ತು ಪುರುಷರಿಗಿರುವಂತೆ ಮತ ಚಲಾಯಿಸುವ ಹಕ್ಕನ್ನು ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದರು. 1875 ಮಾರ್ಚ್ 8 ರಂದು ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದರು. ಈ ಪ್ರತಿಭಟನೆ ಕ್ರಮೇಣ ವಿಶ್ವದಾದ್ಯಂತ ವ್ಯಾಪಿಸಿತು. ನಂತರ ಅನೇಕ ಮಹಿಳಾ ಸಂಘಟನೆಗಳು ಹುಟ್ಟಿದವು.
  1890 ರಲ್ಲಿ ಪ್ರಾರಂಭಗೊಂಡ  NAWSA ( National American Women Suffrage Association)  ಮತ ಚಲಾಯಿಸುವ ಹಕ್ಕಿಗಾಗಿ ಹೋರಾಟ ನಡೆಸಿತು.
     1889 ರಲ್ಲಿ ಕ್ಲಾರಾ ಜೆಟ್ಕಿನ್ ರವರು ಪ್ಯಾರಿಸ್ ನಲ್ಲಿ ನಡೆದ ಕಾಂಗ್ರೆಸ್  ಸಮಾವೇಶದಲ್ಲಿ ಮಹಿಳೆಯರ ಸಮಸ್ಯೆಗಳ ಬಗ್ಗೆ ತಮ್ಮ ಪ್ರಥಮ ಭಾಷಣವನ್ನು ಮಾಡಿದರು.
  1903 ರಲ್ಲಿ ಬ್ರಿಟನ್ನಿನಲ್ಲಿ  WSPU (women's Social Political Union) ಸಹ ಮತ ಚಲಾಯಿಸುವ ಹಕ್ಕಿಗಾಗಿ ಚಳುವಳಿಯನ್ನು ಮಾಡಿತು.
   1908 ರಲ್ಲಿ ವಾಷಿಂಗ್ಟನ್ ನಲ್ಲಿ ಸುಮಾರು ಹದಿನೈದರಿಂದ ಇಪ್ಪತ್ತು ಸಾವಿರ ಮಹಿಳೆಯರು  ಕಡಿಮೆ ದುಡಿಯುವ ಅವಧಿ,  ಉತ್ತಮ ವೇತನ ಮತ್ತು ಮತ ಚಲಾಯಿಸುವ ಹಕ್ಕಿಗಾಗಿ ದೊಡ್ಡ ಮೆರವಣಿಗೆಯನ್ನು ನಡೆಸಿದರು.
  1909 ರಲ್ಲಿ ಅಮೆರಿಕಾದ ಸಮಾಜವಾದಿ ಪಕ್ಷವು ಫೆಬ್ರವರಿ 28 ರಂದು "ಪ್ರಥಮ ರಾಷ್ಟ್ರೀಯ ಮಹಿಳಾ ದಿನ " ವನ್ನು ಆಚರಿಸಿ ತಮ್ಮ ಬೇಡಿಕೆಗಳನ್ನು  ಮಂಡಿಸಿತು.
1910 ರಲ್ಲಿ ಜರ್ಮನಿಯ ಸಮಾಜವಾದಿ ಕ್ಲಾರಾ ಜೆಟ್ಕಿನ್ ಮತ್ತು ರೋಸಾ ಲುಕ್ಸೆಮ್ಬರ್ಗ್ ರವರ ನೇತೃತ್ವದಲ್ಲಿ ಎರಡನೆ ಅಂತರರಾಷ್ರೀಯ ಕಾರ್ಮಿಕ ಮಹಿಳೆಯರ ಸಮಾವೇಶ ಕೊಪನ್ಹೇಗ್ ನಲ್ಲಿ ನಡೆಯಿತು. ಇದರಲ್ಲಿ  ಕ್ಲಾರಾರವರು ಮಾರ್ಚ್ 8 ರಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸುವಂತೆ ಪ್ರಸ್ತಾಪಿಸಿದರು. ಈ ಸಮಾವೇಶದಲ್ಲಿ ಸುಮಾರು ನೂರು ಮಹಿಳೆಯರು ಹದಿನೇಳು ರಾಷ್ಟ್ರಗಳಿಂದ ಪ್ರತಿನಿಧಿಗಳಾಗಿ ಭಾಗವಹಿಸಿದ್ದರು.



   1911 ಮಾರ್ಚ್ 19 ರಲ್ಲಿ ಆಸ್ಟ್ರೇಲಿಯಾ, ಡೆನ್ಮಾರ್ಕ್, ಜರ್ಮನಿ, ಅಮೆರಿಕದ, ಇಂಗ್ಲೆಂಡ್ ಮತ್ತು ಸ್ವಿಟ್ಜರ್‌ಲೆಂಡ್ ನ ಮಹಿಳೆಯರು ಪ್ರತಿಭಟನೆ ನಡೆಸಿದರು. ಇದರಲ್ಲಿ ಒಂದು ಲಕ್ಷಕ್ಕಿಂತಲೂ ಹೆಚ್ಚಾಗಿ ಮಹಿಳೆಯರು ಮತ್ತು ಪುರುಷರು  ಭಾಗವಹಿಸಿದ್ದರು. ಇದರ ಉದ್ದೇಶ ಸ್ತ್ರೀ-ಪುರುಷ ತಾರತಮ್ಯ ನೀತಿಯ ನಿರ್ಮೂಲನವಾಗಿತ್ತು. ಕ್ರಮೇಣ ಈ ಪ್ರತಿಭಟನೆ ವಿಶ್ವದ ಎಲ್ಲೆಡೆ ಪ್ರಾರಂಭವಾಯಿತು.
   1913 ರಲ್ಲಿ ರಷ್ಯಾದ ಮಹಿಳೆಯರು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಿದರು ಮತ್ತು ನಾರ್ವೆಯ ಮಹಿಳೆಯರು ಮತ ಚಲಾಯಿಸುವ ಹಕ್ಕನ್ನು ಪಡೆದುಕೊಂಡರು. 
  1914 ರ ಪ್ರಥಮ ಜಾಗತಿಕ ಯುದ್ಧದಲ್ಲಿ ಯೂರೋಪಿನ ಮಹಿಳೆಯರು  ಯುದ್ಧವನ್ನು ವಿರೋಧಿಸಿ ಮೆರವಣಿಗೆ ನಡೆಸಿ, ವಿಶ್ವಶಾಂತಿಗಾಗಿ ತಮ್ಮ ಐಕ್ಯತೆಯನ್ನು ತೋರಿಸಿದರು.
  1917 ರಲ್ಲಿ ರಷ್ಯಾ ದೇಶವು ಮಾರ್ಚ್ 8 ರಂದು ಅಧಿಕೃತವಾಗಿ ಸರ್ಕಾರಿ ರಜೆಯೆಂದು ಘೋಷಿಸಿತು ಮತ್ತು ಮಹಿಳೆಯರಿಗೆ  ಸಮಾನ ಅವಕಾಶಗಳನ್ನು ನೀಡಿತು. 
    ನಂತರ ಆಸ್ಟ್ರಿಯಾ ,ಅಮೆರಿಕಾ, ಕೆನಡಾ,  ಹಂಗೇರಿ,  ಜರ್ಮನಿ,  ಸ್ವೀಡನ್, ಬ್ರಿಟನ್, ಚಿಲಿ, ಜಪಾನ್ ಮೊದಲಾದ ರಾಷ್ಟ್ರಗಳು ಮಹಿಳೆಯರಿಗೆ ಹಕ್ಕುಗಳನ್ನು ನೀಡಿದವು.
   1975 ರಲ್ಲಿ ಪ್ರಥಮ ಬಾರಿಗೆ ಯುನೈಟೆಡ್ ನೇಷನ್ಸ್ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಿತು ಮತ್ತು ಆ ವರ್ಷವನ್ನು  "ಅಂತರರಾಷ್ಟ್ರೀಯ ಮಹಿಳೆಯರ ವರ್ಷ" ಎಂದು ಘೋಷಿಸಲಾಯಿತು.
   ಈ ರೀತಿಯಾಗಿ ಶೋಷಣೆಯ ವಿರುದ್ಧ ಆರಂಭವಾದ ಹೋರಾಟದ ಫಲವಾಗಿ ಮಾರ್ಚ್ 8 ರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ರೂಪುಗೊಂಡಿತು.
  2011ರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ವಿಶೇಷವಾಗಿತ್ತು. ಅಂದರೆ 2011 ಕ್ಕೆ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ನೂರನೇ ವಸಂತಕ್ಕೆ ಕಾಲಿರಿಸಿತು.
  ಹೀಗೆ ಅಂತರರಾಷ್ಟ್ರೀಯ. ಮಹಿಳಾ ದಿನಾಚರಣೆಯು ಶತಮಾನವನ್ನು ಕಂಡರೂ ಮಹಿಳೆಯರ ಸ್ಥಿತಿಯಿನ್ನೂ ಸುಧಾರಿಸಿಲ್ಲ. "ಹೆಣ್ಣು ಕ್ಷಮಯಾ ಧರಿತ್ರಿ, ಸಹನೆಶೀಲೆ, ತ್ಯಾಗಮಾತೆ, ಪೂಜ್ಯನೀಯಳು" ಎಂದೆಲ್ಲಾ ಹೊಗಳಿದರೂ ಈ ಪುರುಷಪ್ರಧಾನ ಸಮಾಜದಲ್ಲಿ ಹೆಣ್ಣಿನ ಬಗ್ಗೆ ತಾತ್ಸಾರ ಮಾಡುವುದು ನಿಂತಿಲ್ಲ. ಇನ್ನೂ ಸಹಾ ಎಷ್ಟೋ ಮಹಿಳೆಯರು ಕತ್ತಲೆಯಲ್ಲಿಯೇ ಇದ್ದಾರೆ. ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ದಿನೇ ದಿನೇ ಹೆಚ್ಚುತ್ತಿದೆ. ಸ್ತ್ರೀ ಭ್ರೂಣಹತ್ಯೆ ಅವಿರತವಾಗಿ ನಡೆಯುತ್ತಲೇ ಇದೆ. ಇನ್ನು ವರದಕ್ಷಿಣೆ ಸಮಸ್ಯೆ, ಬಾಲ್ಯವಿವಾಹ ಸಮಸ್ಯೆ ಜೀವಂತವಾಗಿದೆ.
  ಇದನ್ನೆಲ್ಲಾ ಹೋಗಲಾಡಿಸಲು ಬೇಕಾದರೆ ಹೆಣ್ಣಿನ ಬಗ್ಗೆಯಿರುವ ಪರಿಕಲ್ಪನೆ  ಬದಲಾಗಬೇಕು. ಹಿಂದೆ "ಹೆಣ್ಣು ಸಂಸಾರದ ಕಣ್ಣಾಗಿದ್ದಳು" ಆದರೆ ಈಗ ಇಡೀ ಸಮಾಜದ ಕಣ್ಣಾಗಿ ಬೆಳೆಯಬೇಕು. ಅಂದರೆ ಈಗ ಆಕೆ ಎಲ್ಲಾ ಕ್ಷೇತ್ರಗಳಲ್ಲೂ ಮುಂದುವರಿದಿದ್ದಾಳೆ. ಇದನ್ನೆಲ್ಲಾ ಸಾಧಿಸಬೇಕಾದರೆ ಅಂದರೆ ಪ್ರಜ್ಞಾವಂತ ಪ್ರಜೆಯಾಗಿ ರೂಪುಗೊಳ್ಳಬೇಕಾದರೆ ಅವಳಿಗೆ ತಂದೆ, ತಾಯಿ ಸರಿಯಾದ ಶಿಕ್ಷಣವನ್ನು ನೀಡಿ, ಅವಳನ್ನು ಸಬಲೆಯನ್ನಾಗಿ ಬೆಳೆಸಬೇಕು. ಇದರಿಂದ ಅವಳಲ್ಲಿ ಧೈರ್ಯ, ಆತ್ಮವಿಶ್ವಾಸ ಹೆಚ್ಚಾಗಿ ಅವಳು ಪ್ರಗತಿಯತ್ತ ಸಾಗುತ್ತಾಳೆ ಮತ್ತು ಇಡೀ ಸಮಾಜವನ್ನು ಪ್ರಗತಿಯತ್ತ ಕೊಂಡೊಯ್ಯುತ್ತಾಳೆ ಎಂಬುವುದರಲ್ಲಿ ಸಂಶಯವೇ ಇಲ್ಲ. 
    -ವಿಜಯಲಕ್ಷ್ಮಿ  .ಎಂ.ಎಸ್.