“ಅಮ್ಮಾ, ಬೇಗ ಬನ್ನಿ. ಆ ಗಂಗಮ್ಮ ಮಗೂಗೆ ಹಾಲನ್ನೇ ಕುಡಿಸುತ್ತಿಲ್ಲ. ಆ ಮಗುವಿನ
ಅಳು ಕೇಳೋಕಾಗ್ತಿಲ್ಲ” ಆಯಾ ಡಾ|| ಸಹನಾಳ ಹತ್ತಿರ ಓಡಿ ಬಂದಳು. ತಕ್ಷಣ ಸ್ಟೆತ್
ಕೈಯಲ್ಲಿ ಹಿಡಿದು, ಮಾಡುತ್ತಿದ್ದ ಊಟವನ್ನು ಬಿಟ್ಟು ವಾರ್ಡಿಗೆ ಹೊರಟಳು ಸಹನಾ.
ರೂಮಿನೊಳಗೆ ಹೋಗಿ ನೋಡಿದಾಗ ಆಯಾ ಹೇಳಿದ್ದರಲ್ಲಿ ಅತಿಶಯೋಕ್ತಿ ಇರಲಿಲ್ಲ.
ಗಂಗಮ್ಮನ ತಾಯಿ ಸಹನಾಳನ್ನು ನೋಡಿದ ಕೂಡಲೇ ಎದ್ದು ನಿಂತು, “ಡಾಕ್ಟರಮ್ಮ,
ನೀವೇ ನೋಡಿ, ಮಗೀಗೆ ಹಾಲು ಕುಡಿಸಲ್ಲ ಅಂತಾ ಹಠ ಹಿಡಿದವಳೆ” ಅಳುತ್ತಲೇ
ಹೇಳಿದಳು. ಹೆಸರಿಗೆ ತಕ್ಕಂತೆ ಸಹನೆಯ ಮೂರ್ತಿಯಂತಿದ್ದ ಸಹನಾ ನಿಧಾನವಾಗಿ
ಕಾರಣ ಕೇಳಿದಳು.
“ಈ ಹಾಳಾದ್ದು ನನ್ನ ಹೊಟ್ಟೆಯಲ್ಲಿ ಯಾಕೆ ಹುಟ್ಟಬೇಕಿತ್ತು? ಅಲ್ನೋಡಿ, ಅವರಿಗೆಲ್ಲಾ
ಗಂಡುಮಕ್ಕಳು. ಇದು ಹುಟ್ಲಿಲ್ಲ ಅಂತ ಅತ್ತವರು ಯಾರೊ?” ಬಡಬಡಿಸಿದಳು. ಸಹನಾಗೆ ವಿಷಯವೆಲ್ಲಾ ಅರ್ಥವಾಯಿತು.
“ಗಂಗಮ್ಮ ಮಗು ಹುಟ್ಟಬೇಕಿತ್ತೊ, ಬೇಡವೊ ಆಮೇಲೆ ಯೋಚಿಸೋಣ. ಈಗ ಮಗೂಗೆ ಹಾಲು ಕುಡಿಸು.”
“ಇಲ್ರವ್ವಾ, ನಾನು ಕುಡಿಸೊಲ್ಲ. ಹೆಣ್ಣಾಗೇನೊ ಹುಟ್ತು, ಬಣ್ಣನಾದ್ರೂ ಚಂದಾಗೈತ?
ಕಾಗೇನೇ ಎಷ್ಟೋ ವಾಸಿ. ಇದು ಇಂಗೆ ಸಾಯ್ಲಿ. ಪೀಡೆ ಕಳೀತು ಅಂದ್ಕೊತೀನಿ” ಸಿಟ್ಟಿನಿಂದಲೇ ಹೇಳಿದಳು.
ಭೂಮಿಗೆ ಬಂದ ತಕ್ಷಣ ಆ ಹಸುಳೆಗೆ ಸಿಕ್ಕ ಸ್ವಾಗತ ಕಂಡು ಸಹನಾಳ ಕಣ್ತುಂಬಿ ಬಂತು. ಅದನ್ನು ಕಂಡು ಗಂಗಮ್ಮ ಗಾಬರಿಗೊಂಡು, “ಅವ್ವಾ, ನಿಮ್ಮನ್ನು ನೋಯ್ಸಿದ್ರೆ ಕ್ಷಮಿಸಿಬಿಡಿ. ನನ್ನ ಸಂಕಟ ಹೇಳ್ಕೋತಾ ಇದ್ದೆ. ಅಷ್ಟೇ ಕಣ್ರವ್ವಾ” ಎಂದಳು. ಆಪತ್ತಿನಲ್ಲಿದ್ದ ತನ್ನನ್ನು ರಕ್ಷಿಸಿ, ಸರ್ಕಾರಿ ಆಸ್ಪತ್ರೆಯಲ್ಲಿ ತನ್ನಂತಹ ಬಡವರ ಬಗ್ಗೆ ಕಾಳಜಿ ಇದ್ದ ಆ ಡಾಕ್ಟರನ್ನು ಕಂಡರೆ ಗಂಗಮ್ಮನಿಗೆ ದೇವರ ಮೇಲಿದ್ದಷ್ಟೆ ಭಕ್ತಿ.
“ಗಂಗಮ್ಮ, ಈ ಕಣ್ಣೀರಿನ ಹಿಂದೆ ದೊಡ್ಡ ಕಥೆಯೇ ಇದೆ. ನಂತರ ಹೇಳ್ತೀನಿ. ಈಗ ಮಗೂಗೆ ಹಾಲು ಕುಡಿಸು.” ಮರುಮಾತಿಲ್ಲದೆ ಮಗುವನ್ನು ಎತ್ತಿಕೊಂಡಳು ಗಂಗಮ್ಮ.
ಸಹನಾ ಎಲ್ಲಾ ಕೆಲಸಗಳನ್ನು ಮುಗಿಸಿ, ಗಂಗಮ್ಮನನ್ನು ಒಮ್ಮೆ ನೋಡಿಕೊಂಡು ಬರಲು ವಾರ್ಡಿನೊಳಗೆ ಹೋದಳು. ಮಗು ಹಾಯಾಗಿ ನಿದ್ರೆ ಮಾಡುತ್ತಿತ್ತು. ಗಂಗಮ್ಮ ಮತ್ತು ಅವಳ ತಾಯಿ ಮಾತನಾಡುತ್ತಿದ್ದರು. ಸಹನಾಳನ್ನು ಕಂಡ ತಕ್ಷಣ, “ಬನ್ರವ್ವಾ, ನಿಮಗಾಗೇ ಕಾಯ್ತಾ ಇದ್ವಿ” ಎಂದಳು ಗಂಗಮ್ಮ.
“ಏನಾದ್ರು ಬೇಕಿತ್ತಾ? ನಾನು ಅಲ್ಲೇ ಆ ರೂಮಿನಲ್ಲಿ ಇದ್ದೆನಲ್ಲಾ?”
“ಅದಕ್ಕಲ್ಲ ಡಾಕ್ಟರವ್ವ ......” ಅರ್ಧಕ್ಕೆ ಸಂಕೋಚ ಪಟ್ಟು ನಿಲ್ಲಿಸಿದಳು.
ಸಹನಾ ತನ್ನ ಕೆಲಸದ ಭರಾಟೆಯಲ್ಲಿ ಬೆಳಗಿನ ಘಟನೆಯನ್ನು ಮರೆತೇ ಹೋಗಿದ್ದಳು.
ಈಗ ನೆನಪಾಯಿತು. “ಹೋಗಲಿ ಬಿಡು ಈಗ ಅದೆಲ್ಲಾ ಯಾಕೆ? ನೀನೂ, ಮಗೂ ಚೆನ್ನಾಗಿದ್ದೀರಲ್ಲ, ಅಷ್ಟು ಸಾಕು.”
“ಯಾಕ್ರವ್ವ, ನಮ್ಮ ಹತ್ರ ಹೇಳ್ಬಾರ್ದಾ? ಹೋಗ್ಲಿ ಬುಡಿ. ನಾನ್ ಕೇಳಿದ್ದೇ ತಪ್ಪಾಯ್ತು” ಗದ್ಗದಿತಳಾದಳು ಗಂಗಮ್ಮ.
“ಅಮ್ಮಾ, ದಯವಿಟ್ಟು ಅದೇನು ಅಂತಾ ಹೇಳಿ. ಬೆಳಗಿನಿಂದ ಒಂದೇ ಸಮ ಕೊರಗ್ತಾವ್ಳೆ, ನಂಗೆ ಪ್ರಾಣ ಕೊಟ್ಟವರ ಕಣ್ಣಲ್ಲಿ ನೀರು ಹಾಕಿಸ್ಬುಟ್ಟೆ ಅಂತಾ” ಬೇಡಿಕೊಂಡಳು ಗಂಗಮ್ಮನ ಅಮ್ಮ ತಾಯವ್ವ.
ವೈದ್ಯ ವೃತ್ತಿಗೆ ಸೇರಿಕೊಂಡ ನಂತರ ರೋಗಿಗಳ ಬಗೆಗಿನ ತನ್ನ ಕಾಳಜಿಯಿಂದಾಗಿ ಅವರ ಪ್ರೀತಿ-ವಾತ್ಸಲ್ಯ ಗಳಿಸಿಕೊಂಡಿದ್ದ ಸಹನಾಗೆ ಇದೇನು ಹೊಸದಾಗಿರಲಿಲ್ಲ. ರಂಗೇನಹಳ್ಳಿಯನ್ನು ಬಿಟ್ಟು ಬಂದಾಗ, ಆ ಜನರ ಅಶ್ರುಪೂರಿತ ಬೀಳ್ಕೊಡುಗೆಯನ್ನು ಅವಳಿನ್ನೂ ಮರೆತಿರಲಿಲ್ಲ. ಈಗಲೂ ಸಹ ಒಂದೇ ವಾರದಲ್ಲಿ ಗಂಗಮ್ಮ ಮತ್ತು ತಾಯಮ್ಮ ಅವಳ ಬಗ್ಗೆ ಬಹಳ ಗೌರವ-ಭಕ್ತಿಯನ್ನು ಬೆಳೆಸಿಕೊಂಡಿದ್ದರು. ಒಮ್ಮೆ ಸಹನಾಳ ಸ್ಕೂಟರ್ ಕೆಟ್ಟು ನಿಂತಾಗ ಗಂಗಮ್ಮನ ಗಂಡ ನಂಜಪ್ಪ ಓಡಿ ಬಂದು ರಿಪೇರಿ ಮಾಡಿಕೊಟ್ಟಿದ್ದ. ಸಹನಾ ಎಷ್ಟೇ ಬಲವಂತ ಮಾಡಿದರೂ ಹಣ ತೆಗೆದುಕೊಂಡಿರಲಿಲ್ಲ.
“ಗಂಗಮ್ಮ, ಈ ಪೀಡೆ ಏಕೆ ಹುಟ್ಟಿತೊ ಎಂದೆಯಲ್ಲಾ....... ನಾನು ಈ ಭೂಮಿಗೆ ಬಂದಾಗಲೂ ನನ್ನ ತಾಯಿ ಇದೇ ಮಾತನ್ನು ಹೇಳಿದ್ದರು.......”
“ಅವ್ವಾ, ನಿಮ್ಮನ್ನು . . . . ಮಹಾಲಕ್ಷ್ಮಿಯನ್ನು. . . . . ಛೆ ಬಿಡ್ತು ಅನ್ನಿ,” ಮುಂದೆ ಮಾತೇ ಬರಲಿಲ್ಲ.
“ಈಗ ಮಹಾಲಕ್ಷ್ಮಿ, ಆಗ ನಾನು ಇದರ ತರಹವೇ ಇದ್ದೆ'' ತೊಟ್ಟಿಲಿನತ್ತ ಬೆಟ್ಟು ಮಾಡಿ ತೋರಿಸಿದಳು. ಹಾಗೆಯೇ ಗತಕಾಲಕ್ಕೆ ಇಳಿದುಹೋದಳು.
- * -
ನಾಲ್ಕನೇ ಮಗುವಾದಾಗ ಗಂಡೇ ಆಗುತ್ತೆ ಅಂದುಕೊಂಡ ತಂದೆ-ತಾಯಿಗಳಿಗೆ ನಿರಾಶೆಯಾಗಿತ್ತು. ಜೊತೆಗೆ ಅದರ ಬಣ್ಣ ಕಪ್ಪು, ಕಪ್ಪೆಂದರೆ ಮಸಿಯಷ್ಟೆ ಕಪ್ಪು. ಆ ಮನೆಯಲ್ಲಿ ಅಪ್ಪಾ, ಅಮ್ಮ, ಮಕ್ಕಳು ಎಲ್ಲರೂ ಚಿನ್ನದಂತಹವರೇ, ಈ ಕಡೆಯದು “ಯಾವ ಜನ್ಮದ ಪ್ರಾರಬ್ಧವೊ”- ಬಹುಶಃ ಯಾವ ತಾಯಿಯೂ ಸಹ ತನ್ನ ಮಗುವಿಗೆ ಇಂತಹ ಆಶೀರ್ವಾದ ನೀಡಿರಲಾರಳು!
ಎಲ್ಲರ ತಾತ್ಸಾರದಲ್ಲಿಯೇ ಬೆಳೆಯಿತು ಆ ಮಗು. ಅದು ಉಸಿರುಗಟ್ಟಿ ಅಳುತ್ತಿದ್ದರೂ ಲೆಕ್ಕಿಸದೆ, ನಂತರ ಬೈದುಕೊಂಡೇ ಹಾಲು ನೀಡುತ್ತಿದ್ದ ತಾಯಿ, ಹತ್ತಿರವೇ ಸೇರಿಸದ ತಂದೆ, ಇವಳ ಅಸ್ತಿತ್ವವನ್ನೇ ಲೆಕ್ಕಿಸದ ಇಬ್ಬರು ಅಕ್ಕಂದಿರು, ಮತ್ತೋರ್ವ ಅಣ್ಣ - ಇವರ ನಡುವೆಯೇ ಬೆಳೆಯಿತು. ಆ ಮಗು ಹೊರಳಿತು, ತೆವಳಿತು, ಹೊಸಿಲು ದಾಟಿತು, ನಡೆಯಲಾರಂಭಿಸಿತು, ನಕ್ಕಿತು, ಮಾತನಾಡಿತು. ಆದರೆ ಯಾರಿಗೂ, ಯಾವ ಸಂಭ್ರಮವೂ ಇಲ್ಲ.
ಅರಿವಾಗದಿದ್ದಾಗ ಅವರ ವರ್ತನೆಗಳಿಗೆ ಪ್ರತಿಕ್ರಿಯಿಸದೆ ತನ್ನ ಸುಂದರ ನಗುವನ್ನೆ ಬೀರುತ್ತಿದ್ದ ಅದಕ್ಕೆ, ನಂತರ ಎಲ್ಲೋ, ಏನೋ ಸರಿಯಿಲ್ಲ ಎನಿಸುತ್ತಿತ್ತು. “ಅಮ್ಮಾ” ಎಂದು ಓಡಿ ಹೋದರೆ, “ಹೋಗೆ ನನಗೆ ಕೆಲಸವಿದೆ” ಎಂದು ತಳ್ಳುವ ತಾಯಿ. “ಅಪ್ಪಾ” ಎನ್ನುತ್ತಾ ಕಾಲುಗಳನ್ನು ತಬ್ಬಿದರೆ ದೂರ ನೂಕಿ, “ಏ, ಇದನ್ನು ನೋಡು” ಎನ್ನುವ ತಂದೆ. ಅಣ್ಣ-ಅಕ್ಕಂದಿರ ಜೊತೆ ಆಟವಾಡಲು ಹೋದರೆ, “ಅಮ್ಮಾ, ನೋಡಮ್ಮ ಇವಳ್ನ, ಕರ್ಕೊಳಮ್ಮ” ಸುಮ್ಮಸುಮ್ಮನೆ ಚಾಡಿ ಹೇಳುವರು. ಏಕೆ ಹೀಗೆ? ಪುಟ್ಟ ಮನದಲ್ಲಿ ದೊಡ್ಡ ಪ್ರಶ್ನೆ.
ಆ ಪುಟ್ಟ, ಮೃದು ಮನಸ್ಸಿಗಾಗುತ್ತಿದ್ದ ನೋವಿಗಿದ್ದ ಆಸರೆ ಒಂದೇ. ಅದು ಅವಳ ಅಜ್ಜಿ.
ಅಳುತ್ತ ಬರುವ ಆ ಕಂದಮ್ಮನ ಕಣ್ಣೀರು ತೊಡೆಯುವ ಏಕೈಕ ಕೈ. ಅಜ್ಜಿಯಿಂದಾಗಿಯೇ ಇವರೆಲ್ಲರಿಗೂ ಎಷ್ಟೆ ಸಿಟ್ಟಿದ್ದರೂ ತೋರಿಸಿಕೊಳ್ಳುತ್ತಿರಲಿಲ್ಲ.
ಶಾಲೆಗೆ ಸೇರಿಸುವ ದಿನದಂದು ಮನೆಯಲ್ಲಿ ಅಮ್ಮನದು ಒಂದೇ ಗಲಾಟೆ, “ಇವಳಿಗೇಕೆ ಓದು” ಎಂದು. ತಂದೆ ಇದಾವುದೂ ತನಗೆ ಸಂಬಂಧವಿಲ್ಲವೆಂಬಂತೆ ನಿರ್ಲಿಪ್ತರು. ಅಣ್ಣ-ಅಕ್ಕಂದಿರದ್ದು ಇನ್ನೊಂದು ರೀತಿ. “ಅಮ್ಮಾ, ಈ ಕರಿ ಮುಸುಡಿಯನ್ನು ನಮ್ಮ ಜೊತೆಗೆ ಕರ್ಕೊಂಡು ಹೋಗೋಕೆ ಆಗಲ್ಲ, ಇವಳಿಗಿಂತ ಕೆಲಸದ ನರಸೀನೆ ಎಷ್ಟೋ ವಾಸಿ.” ಅಪ್ಪಾ, “ದುಡ್ಡು ದಂಡ” ಎಂದರೂ ಪಟ್ಟು ಬಿಡದೇ ತನ್ನದೇ ಹಣದಲ್ಲಿ ಆ ಮಗುವನ್ನು ಶಾಲೆಗೆ ಸೇರಿಸಿತು ಅಜ್ಜಿ.
‘ಸಹನಾ’ - ಅದೇಕೆ ಅಜ್ಜಿ ಅವಳಿಗೆ ಆ ಹೆಸರಿಟ್ಟರೋ, ಅವಳು ಅದೇ ರೀತಿ ಎಲ್ಲಾ ದುಃಖವನ್ನು ಸಹಿಸುತ್ತಾ, ನೋವನ್ನುಣ್ಣುತ್ತಾ ಬೆಳೆದಳು. ಯಾರೊಂದಿಗೂ ಬೆರೆಯದೆ - ಬೆರೆಯಲು ಅವಕಾಶವೆಲ್ಲಿ – ತನ್ನಷ್ಟಕ್ಕೆ ತಾನೇ ಓದುತ್ತಲೊ, ಬರೆಯುತ್ತಲೊ, ಅಜ್ಜಿಯ ಜೊತೆಯಲ್ಲೊ ಕಾಲ ಕಳೆಯುವಳು. ಹಾಡೊಂದು ಅವಳ ಜೊತೆಗಾತಿ. ಅಷ್ಟು ಒಳ್ಳೆಯ ಕಂಠವಿದ್ದರೂ ಅವಳು ಹಾಡಲಾರಂಭಿಸಿದರೆ, ಅದಕ್ಕೂ ಕುಹಕ.
ವರುಷಗಳು ಉರುಳಿದವು. ಎಲ್ಲದರಲ್ಲೂ ಬದಲಾವಣೆ, ಮನೆಯಲ್ಲೂ ಸಹ. ಆದರೆ ಸಹನಾ ವಿಷಯವಾಗಿ ಮಾತ್ರ ಅದೇ ಕಠೋರತೆ ಅಥವಾ ಅದಕ್ಕಿಂತ ಹೆಚ್ಚು. ಇದೆಲ್ಲದರ ನಡುವೆಯೂ ಸಹನಾ ಎಸ್ಎಸ್ಎಲ್ಸಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಳು. ಆದರೆ ಮನೆಯವರಲ್ಲಿ ಆ ಸಂತಸಕ್ಕಿಂತ ಕಾಲೇಜಿಗೆ ಕಳಿಸಬೇಕಲ್ಲ ಎನ್ನುವ ಕೊರಗೇ ಹೆಚ್ಚಾಯಿತು. ಅಲ್ಲೂ ರಕ್ಷಣೆಗೆ ಬಂದವರು ಅಜ್ಜಿಯೇ.
“ಇನ್ಯಾಕಮ್ಮ ಇವಳಿಗೆ ಓದು? ಮನೆಯಲ್ಲೇ ಇದ್ದುಕೊಂಡು ಅವಳಮ್ಮನಿಗೆ ಸಹಾಯ
ಮಾಡಲಿ” ತಂದೆಯ ಹೇಳಿಕೆ. “ಇಷ್ಟು ದಿನ ಅವಳೇ ಕಣೋ ನಿನ್ನ ಹೆಂಡತಿಗೆ ಸಹಾಯ ಮಾಡುತ್ತಿದ್ದದ್ದು.”
“ಅತ್ತೆ, ಈಗಲೇ ಇವಳಿರೋ ಚಂದಕ್ಕೆ ಬಹಳಷ್ಟು ಖರ್ಚು ಮಾಡಬೇಕು, ಅಂತಾದ್ರಲ್ಲಿ
ಇವಳು ಓದಿದರೆ. . . . ಬೇಡಪ್ಪಾ ಬೇಡ” ಅಮ್ಮನ ಗಲಾಟೆ.
ಅಮ್ಮ, ಅಪ್ಪ ಏನೆಂದರೂ ಜಗ್ಗಲಿಲ್ಲ ಅಜ್ಜಿ. “ನಾನಿದ್ದಾಗಲೇ ಈ ಕಂದನ ಪಾಡು ಹೀಗೆ, ಇನ್ನು ನಾನು ಕಣ್ಣು ಮುಚ್ಚಿದರೆ. . . . ಇಲ್ಲಾ, ಇವಳು ಓದಿ ತನ್ನ ಕಾಲ ಮೇಲೆ ತಾನು ನಿಂತುಕೊಳ್ಳಬೇಕು.” ‘ನಿನ್ನಿಂದಲೇ ಇಷ್ಟೆಲ್ಲಾ’ ಎನ್ನುವಂತೆ ಎಲ್ಲರ ಕೆಂಗಣ್ಣು ಸಹನಾಳ ಮೇಲೆ.
ತನ್ನ ಬಣ್ಣ, ತನ್ನ ರೂಪು ತನ್ನ ಕೈಯಲಿತ್ತೇ? ಕಪ್ಪಾಗಿ, ಕುರೂಪಿಗಳಾದವರಿಗೆ ಬದುಕಲು ಅರ್ಹತೆಯೇ ಇಲ್ಲವೇ? ಅಣ್ಣ-ಅಕ್ಕಂದಿರಿಗೆ ಜನ್ಮ ಕೊಟ್ಟವರೇ ತನಗೂ ಜನ್ಮದಾತರಲ್ಲವೆ? ಆದರೂ ಈ ವ್ಯತ್ಯಾಸ ಏಕೆ? ಏಕೆ? ಏಕೆ? ಉತ್ತರ ದೊರಕದೆ ನಿರಾಶಳಾದಾಗ ಮತ್ತೆ ಆಸರೆ ಅಜ್ಜಿಯೇ. ಅಜ್ಜಿಯ ಆಶ್ರಯ ಇರುವವರೆಗೂ ಯಾರ ಆಕ್ರೋಶಕ್ಕೂ ಅವಳು ಬೆಲೆ ಕೊಡುವ ಅವಶ್ಯಕತೆಯಿರಲಿಲ್ಲ.
ಪಿಯುಸಿಯಲ್ಲಿ ಉತ್ತಮ ಅಂಕಗಳನ್ನು ಪಡೆದದ್ದಾಯಿತು. ಮೆಡಿಕಲ್ಗೆ ಸೀಟೂ ಸಿಕ್ಕಿತು. ಮೆರಿಟ್ ಆಧಾರದ ಮೇಲೆ ತಂಗಿಗೆ ಸೀಟು ಸಿಕ್ಕಿತಲ್ಲಾ ಎನ್ನುವ ಆನಂದಕ್ಕಿಂತ, ಯಾವಾಗಲೂ ಕನ್ನಡಿಯ ಮುಂದೆ ಕುಳಿತು ಮೇಕಪ್ ಮಾಡಿಕೊಳ್ಳುತ್ತಾ ಒಂದೇ ಪರೀಕ್ಷೆಯನ್ನು ಎರಡೆರಡು ಬಾರಿ ತೆಗೆದುಕೊಳ್ಳುವ ಅಣ್ಣ-ಅಕ್ಕಂದಿರಿಗೆ ಹೊಟ್ಟೆಕಿಚ್ಚು.
“ಅಷ್ಟು ದುಡ್ಡು ಕೊಟ್ಟು ಓದಿಸಲಾರೆ” ತಂದೆಯ ಮಾತು.
“ಅಷ್ಟು ದಿನ ನಿನ್ನನ್ನು ಸಾಕುವವರು ಯಾರು?” ತಾಯಿಯ ಪ್ರಶ್ನೆ.
“ಹೊರಗಡೆ ಹೋಗೋ ಹೆಣ್ಣು ಮಕ್ಕಳಿಗೆ ಈ ಖರ್ಚೆಲ್ಲಾ ಅನವಶ್ಯಕ” ಅಣ್ಣನ ಲೆಕ್ಕಾಚಾರ. ಇದನ್ನೆಲ್ಲಾ ಕೇಳಿ ಗರಬಡಿದಂತಾದಳು ಸಹನಾ.
ಮರುದಿನ ಅಜ್ಜಿ-ಮೊಮ್ಮಗಳಿಬ್ಬರೂ ಹೊರಗೆ ಹೋಗಿದ್ದನ್ನು ಕಂಡು ಎಲ್ಲರಿಗೂ ಕುತೂಹಲ. ಆದರೆ ಯಾರಿಗೂ ಕೇಳುವ ಧೈರ್ಯವಿರಲಿಲ್ಲ. ಸಂಜೆಯ ಹೊತ್ತಿಗೆ ಇಬ್ಬರೂ ಹಿಂತಿರುಗಿದಾಗ ಅವರ ಮುಖದ ಮೇಲೆ ಆಯಾಸವಿದ್ದರೂ ಗೆಲುವಿತ್ತು. ಅಜ್ಜಿಯ ಮುಖದ ಮೇಲಂತೂ ಬಚ್ಚಿಡಲಾರದಷ್ಟು ಆನಂದ. ಅಜ್ಜಿಯ ಬರಿಗೈ, ಸಹನಾ ಕೈಯಲ್ಲಿದ್ದ ಫೈಲ್ ಎರಡನ್ನೂ ನೋಡಿ ಎಲ್ಲರಿಗೂ ವಿಷಯ ಅರ್ಥವಾಯಿತು.
“ಕೊನೆಗೂ ನಿಮ್ಮ ಹಠಾನೇ ಸಾಧಿಸಿಬಿಟ್ರಿ, ಬಳೆಗಳನ್ನು ಮಾರಿ ಅವಳನ್ನು ಕಾಲೇಜಿಗೆ ಸೇರಿಸುವ ಅವಶ್ಯಕತೆ ಇತ್ತೇ?” ಅಮ್ಮ ಕೇಳಿದರು.
“ಈ ಮಗು ನಿಮಗೆ ಕೀರ್ತಿ ತರುತ್ತೆ” ಎಂದು ಹೇಳಿ ಅಮ್ಮ ಗೊಣಗುತ್ತಲೇ ಇದ್ದರೂ ಒಳನಡೆದರು ಅಜ್ಜಿ.
ಸಹನಾಳ ಹೊಸ ಜೀವನ ಆರಂಭವಾಯಿತು. ಹೊಸ ಪರಿಸರ, ಹೊಸ ಪರಿಚಯ. ಹೊಂದಿಕೊಳ್ಳಲು ಸ್ನೇಹಮಯಿ ಸಹನಾಗೆ ಕಷ್ಟವಾಗಲಿಲ್ಲ. ಕಾಲೇಜು, ಲೈಬ್ರರಿ, ಸ್ನೇಹಿತರು ಎನ್ನುತ್ತಾ ಮನೆಗೆ ಬರುತ್ತಿದ್ದುದೇ ತಡವಾಗಿ, ಬಂದ ಮೇಲೆ ಅಜ್ಜಿಯೊಂದಿಗೆ ಒಡನಾಟ.
ಹೀಗೆಯೇ ಎರಡು ವರ್ಷಗಳು ಕಳೆದವು. ಮೊಮ್ಮಗಳು ಡಾಕ್ಟರ್ ಆಗುವುದನ್ನು ಕಾಣಬಯಸಿದ ಅಜ್ಜಿ ತಮ್ಮ ಆಸೆ ಪೂರೈಸುವ ಮುನ್ನವೇ, ತಮ್ಮ ಮುದ್ದು ಕಂದಮ್ಮನನ್ನು ಕಟುಕರ ನಡುವೆ ಬಿಟ್ಟು ತೀರಿಕೊಂಡರು. ನಿರಾಶ್ರಿತಳಾದಳು ಸಹನಾ. ತನ್ನ ನೋವು, ನಲಿವುಗಳನ್ನು ಇನ್ನು ಮುಂದೆ ಹಂಚಿಕೊಳ್ಳುವುದಾದರೂ ಯಾರಲ್ಲಿ? ಕಣ್ಣಂಚಿನಿಂದ ಕಂಬನಿ ಜಾರುವ ಮುನ್ನವೇ ತಡೆಯುತ್ತಿದ್ದ ಆ ಕೈ ಎಲ್ಲಿ? ಮುಂದೆ ಏನು? - ಪ್ರಶ್ನೆಗಳು ಭೂತಾಕಾರವಾಗಿ ನಿಂತವು.
ಮಾನಸಿಕ ಆಶ್ರಯವಿಲ್ಲದೆ ಕಂಗೆಟ್ಟಿದ ಸಹನಾಗೆ ಕೆಲವೇ ದಿನಗಳಲ್ಲಿ ಹಣದ ಮುಗ್ಗಟ್ಟು ಕಾಣಿಸಿಕೊಂಡಿತು. ಅಜ್ಜಿ ಇರುವವರೆಗೂ ಅವಳು ಎಂದೂ ತಾಯ್ತಂದೆಯರ ಮುಂದೆ ಕೈಚಾಚಿರಲಿಲ್ಲ. ಈಗ ಕೇಳುವುದಾದರೂ ಹೇಗೆ? ಕೇಳಿದರೂ ಪ್ರಯೋಜನ ಉಂಟೇ?
ಹುಟ್ಟಿದ್ದೇ ಭಾರ ಎಂದುಕೊಂಡಿರುವ ತಾಯ್ತಂದೆಯರು ಮನೆಯಲ್ಲಿ ಇದ್ದಾಳಲ್ಲಾ ಎಂಬ ಒಂದೇ ಕಾರಣಕ್ಕೆ ಊಟ ಹಾಕುತ್ತಿದ್ದರೇ ಹೊರತು ಇನ್ಯಾವುದಕ್ಕೂ ಖರ್ಚು ಮಾಡಿದವರಲ್ಲ. ಬಟ್ಟೆಯೂ ಅಷ್ಟೆ – ಅಕ್ಕಂದಿರದ್ದು ಹಳೆಯದಾದ ಮೇಲೆ ಇವಳಿಗೆ. ಈಗ ದಾರಿ ಏನು? ಬರುವ ಸ್ಕಾಲರ್ಶಿಪ್ನಲ್ಲಿ ಕಾಲೇಜಿನ ಸಮಸ್ಯೆ ಏನೂ ಬರುವುದಿಲ್ಲ. ಆದರೆ ಬೇರೆ ಖರ್ಚಿಗೆ. . . . . ..
ಇಂತಹ ಸಮಯದಲ್ಲಿ ಅವಳಿಗೆ ಸಂಜೀವಿನಿಯನ್ನೇ ಹೊತ್ತು ತಂದವರು ಲಾಯರ್. ಅಜ್ಜಿ ತನ್ನ ಆಸ್ತಿಪಾಸ್ತಿಯನ್ನು
ಎಲ್ಲಾ ಮಕ್ಕಳಿಗೆ ಸಮನಾಗಿ ಹಂಚಿದ್ದರೂ, ತಮ್ಮ ಒಡವೆಯನ್ನು ಮಾರಿ ಒಂದು ಲಕ್ಷವನ್ನು ಬ್ಯಾಂಕಿನಲ್ಲಿಟ್ಟು ಪ್ರತಿ ತಿಂಗಳು ಬಡ್ಡಿ ಸಹನಾಗೆ ಸೇರುವಂತೆ ಮಾಡಿದ್ದರು. ಅಜ್ಜಿಯ ದೂರದೃಷ್ಟಿ ನೋಡಿ ಕಂಬನಿಗರೆದಿದ್ದಳು ಸಹನಾ.
ಉಳಿದವರಿಗೆಲ್ಲರಿಗೂ ಇವಳ ಮೇಲೆ ಸಿಟ್ಟು. “ಯಾರೂ ಈಗ ಅವಳ ಬಗ್ಗೆ ಮಾತನಾಡಬೇಡಿ. ಅವಳೀಗ ಲಕ್ಷಾಧಿಪತಿ” ಎಲ್ಲರ ಅಣಕ.
ಈಗ ಹಣದ ಸಮಸ್ಯೆ ಇಲ್ಲದಿದ್ದರೂ, ಹೋಗುವಾಗ ‘ಹೊರಟೆಯಾ’ ಎನ್ನುವವರಿಲ್ಲ, ಬಂದಾಗ ‘ಬಾ ಕಂದ’ ಎನ್ನುವವರಿರಲಿಲ್ಲ. ಕೇಳುತ್ತಿದ್ದ ಒಂದೇ ಒಂದು ಕಂಠ ಕಣ್ಮರೆಯಾಗಿತ್ತು. ಬರಬರುತ್ತಾ ಮನೆಯಲ್ಲಿ ಎಷ್ಟೋ ಬಾರಿ ಅನ್ನವಿದ್ದರೆ ಸಾರಿರುತ್ತಿರಲಿಲ್ಲ, ಸಾರಿದ್ದರೆ ಅನ್ನವಿರುತ್ತಿರಲಿಲ್ಲ. ಮನೆಗೆ ಬರುವುದೆಂದರೆ ಅವಳಿಗೆ
ಜಿಗುಪ್ಸೆಯುಂಟಾಗುತ್ತಿತ್ತು.
ಕೊನೆಗೊಮ್ಮೆ ತಂದೆಯ ಮುಂದೆ ನಿಂತು, “ಅಪ್ಪಾ, ನಾನು ಹಾಸ್ಟೆಲ್ಲಿನಲ್ಲಿರೋಣ ಎಂದುಕೊಂಡಿದ್ದೀನಿ” ಎಂದಾಗ “ಪೀಡೆ ಕಳೆಯಿತು” ಎಂಬಂತೆ “ಆಯ್ತು” ಎಂದರು. “ಏನಮ್ಮ ನಿನ್ನ ತೊಂದರೆ” ಎಂದು ಕೇಳಿದ್ದರೆ ಎಂತಹ ಕಷ್ಟವನ್ನಾದರೂ ಸಹಿಸಬಹುದಿತ್ತು.
ಅಡುಗೆ ಮನೆಗೆ ಹೋದ ತಕ್ಷಣ ಅಮ್ಮಾ, “ವಿವರವೇನು ಬೇಕಿಲ್ಲ. ನೀನೇ ಎಲ್ಲಾ ತೀರ್ಮಾನ ತಗೊಂಡಿದ್ದೀಯಲ್ಲ. ನೀನು ಚೆನ್ನಾಗಿರಬೇಕಷ್ಟೆ” ತೋರಿಕೆಯ ಆಶೀರ್ವಾದ ಮಾಡಿದಾಗ ಸಹನಾ ಮೂಕಳಾದಳು.
ಹಾಸ್ಟೆಲ್ನಲ್ಲಿ ಸ್ನೇಹಿತೆಯರ ಜೊತೆ, ಅವರೇ ಅವಳವರಾದಾಗ, ಮೂರು ವರ್ಷಗಳು
ಬಹು ಬೇಗನೆ ಉರುಳಿದವು. ಆ ದಿನಗಳಲ್ಲಿ ಮನೆಯವರು ಹಾಸ್ಟೆಲ್ಲಿಗೆ ಬಂದದ್ದು ಅಣ್ಣ-
ಅಕ್ಕಂದಿರ ಲಗ್ನಪತ್ರಿಕೆ ನೀಡಲು. ತಂದೆಯ ಸಾವಿನ ವಾರ್ತೆಯನ್ನೂ ಸಹ ಫೋನಿನಲ್ಲಿ ಹೇಳಿದರು.
ಡಿಗ್ರಿ ಪಡೆದ ತಕ್ಷಣ ಹಳ್ಳಿಯೊಂದರಲ್ಲಿ ಸರ್ಕಾರಿ ನೌಕರಿ ಸಿಕ್ಕಿತು. ಸಂತಸದಿಂದಲೇ ಒಪ್ಪಿಕೊಂಡಳು. ಹೋಗುವ ಮುನ್ನ ತಾಯಿಯನ್ನೊಮ್ಮೆ ನೋಡಿ ಬರಲು ಹಿರಿಯಕ್ಕ ವನಜಾಳ ಮನೆಗೆ ಹೋದಳು. “ಬಾಮ್ಮಾ, ಬಾ” ಅಕ್ಕನ ಆತ್ಮೀಯತೆಯ ದನಿ ಕೇಳಿ ಈ ತೋರಿಕೆಯ ಅಕ್ಕರೆಯೆಲ್ಲಾ ತನ್ನ ಕೆಲಸದಿಂದ ಎಂದರಿತಳು. ‘ಈಗ ತನ್ನ ಕಪ್ಪು ಬಣ್ಣ ಎಲ್ಲಿ ಹೋಯಿತೋ’ ಎಂದುಕೊಂಡರೂ ತೋರಿಸದೆ ಮುಗುಳ್ನಗುತ್ತಾ ಒಳನಡೆದಳು.
“ಹೋಗಿ, ಹೋಗಿ ಆ ಹಳ್ಳಿ ಕೊಂಪೆಗೆ ಹಾಕಿಸಿಕೊಂಡಿದ್ದೀಯಲ್ಲ ಬುದ್ಧಿಯಿಲ್ವಾ ನಿನಗೆ” ಅಮ್ಮ ಏರು ದನಿಯಲ್ಲೇ ಕೇಳಿದಾಗ ಅದಕ್ಕುತ್ತರಿಸದೆ ನಗುತ್ತಲೇ “ನಿನಗಿಷ್ಟವಾದಾಗ ಈ ಮಗಳ ಮನೆಗೆ ಬಾ” ಆಹ್ವಾನಿಸಿದಳು.
“ಆ ಕೊಂಪೆಗೆ ಯಾರು ಬರುತ್ತಾರೆ” ಮುಖಕ್ಕೆ ರಾಚಿತು ಉತ್ತರ.
ಹೊರಟು ನಿಂತ ಮೇಲೆ ಅಕ್ಕ ಕೇಳಿದಳು, “ಕಾಫಿ ಕುಡಿದುಕೊಂಡು ಹೋಗಬಹುದಲ್ವಾ?”
ಹಳ್ಳಿಗೆ ಹೋದ ಸಹನಾ ಸ್ವಲ್ಪ ಕಾಲದಲ್ಲಿಯೇ ಅಲ್ಲಿನ ಜನರಿಗೆ ಪ್ರೀತಿಪಾತ್ರಳಾದಳು. ಯಾವ ಡಾಕ್ಟರ್ ಬಂದರೂ ಎರಡು ತಿಂಗಳು ಇರದ ಆ ಹಳ್ಳಿಯಲ್ಲಿ ಸಹನಾ ಮೂರು ವರ್ಷಗಳಾದರೂ ಅಲ್ಲಿಯೇ ಉಳಿದಾಗ ಜನರ ಪಾಲಿಗೆ ದೇವತೆಯೇ ಆಗಿಬಿಟ್ಟಳು. ಸಹನಾಗೆ ಸಹ ಆ ಜನ ತನ್ನವರೇ ಎನ್ನಿಸಲಾರಂಭಿಸಿತ್ತು. ಕೆಲವರಿಗೆ ಅಕ್ಕನಾದರೆ, ಕೆಲವರಿಗೆ ಮಗಳು, ಕೆಲವರಿಗೆ ತಾಯಿ - ಹೀಗೆ ರಂಗೇನಹಳ್ಳಿಯ ಜನರೊಂದಿಗೆ ಆಕೆ ಒಂದಾಗಿ ಹೋದಳು.
“ಅಮ್ಮನಿಗೆ ಸೀರಿಯಸ್. ಅರ್ಜೆಂಟಾಗಿ ಬಾ” ಟೆಲಿಗ್ರಾಮ್ ಕಂಡು ಬೆಂಗಳೂರಿಗೆ ಹೊರಟಳು. ಅಣ್ಣನ ಮನೆಗೆ ಹೋದಾಗ ತಿಳಿದ ವಿಷಯವಿಷ್ಟು - ಅಮ್ಮ ಬಚ್ಚಲು ಮನೆಯಲ್ಲಿ ಜಾರಿ ಬಿದ್ದು ಕಾಲು ಮುರಿದುಕೊಂಡಿದ್ದಾರೆಂದು. “ಮತ್ತೆ ಸೀರಿಯಸ್ ಎಂದು. . . . . .” ಅವಳ ಪ್ರಶ್ನೆಗೆ, “ನೀನು ಬರ್ತೀಯೊ, ಇಲ್ಲವೊ ಎಂದು” ಅಕ್ಕನ ಉತ್ತರ. “ಇವರೆಂದೂ ಬದಲಾಗುವುದೇ ಇಲ್ಲವೇನೋ” ಎಂದುಕೊಂಡು ಒಳಗೆ ನಡೆದಳು.
ಅಮ್ಮಾ ಎರಡೇ ದಿನಗಳಲ್ಲಿ ಇಳಿದು ಹೋಗಿದ್ದರು. ಏನಾಯಿತೆಂದು ಕೇಳಿದರೆ ಮಾತನಾಡದೆ ರಿಪೋರ್ಟ್ಸ್ ಕೈಯಲ್ಲಿಟ್ಟು ಮಲಗಿದರು. ಮೌನವಾಗಿ ಕುಳಿತು ಆ ರಿಪೋರ್ಟ್ಸ್ ನೋಡಲಾರಂಭಿಸಿದಳು. ಅಷ್ಟರಲ್ಲಿ ಹೊರಗಡೆ ಜೋರಾದ ಮಾತುಕತೆ ಆರಂಭವಾಯಿತು. ಪಿಸುಮಾತುಗಳಿಂದ ಆರಂಭವಾದದ್ದು ಏರುದನಿಯಾದಾಗ ಅವಳಿಗೆ ಆ ಮಾತುಗಳು ಕೇಳಲಾರಂಭಿಸಿದವು.
“ನಾನಂತೂ ನೋಡಿಕೊಳ್ಳೋಕಾಗಲ್ಲ, ನೀನೇ ಕರೆದುಕೊಡು ಹೋಗು ವನಜಾ” ಅತ್ತಿಗೆಯ ಧ್ವನಿ.
“ಅಯ್ಯೋ, ನಮ್ಮನೇಲಿರೋದೆ ಒಂದು ರೂಮು, ಅಮ್ಮನನ್ನು ಎಲ್ಲಿ ಇರಿಸಿಕೊಳ್ಳಲಿ? ಗಿರಿಜಾ ಮನೆಗೆ ಹೋಗ್ಲಿ.”
“ನನ್ನ ಆರೋಗ್ಯಾನೇ ಸರಿ ಇರಲ್ಲ, ಅವರನ್ನು ಹೇಗೆ ಸುಧಾರಿಸಲಿ? ನಿಮ್ಮ ಅತ್ತಿಗೆಗೆ ಇಬ್ಬರನ್ನೂ ಸುಧಾರಿಸು ಎಂದು ಹೇಗೆ ಹೇಳಲಿ. ಈಗ ನಿಮ್ಮಿಬ್ಬರಲ್ಲಿ ಯಾರಾದರೂ ನೋಡಿಕೊಳ್ಳಿ.” ಅಣ್ಣನ ಏರುಧ್ವನಿ.
ಅಮ್ಮಾ ಗಟ್ಟಿಮುಟ್ಟಾಗಿದ್ದಾಗಲೂ ಇವರ ಕಚ್ಚಾಟ ಹೀಗೆ ಇತ್ತು. ಆದರೆ ಆಗ ಅದು ಅಮ್ಮಾ ಯಾರ ಮನೆಯಲ್ಲಿರಬೇಕು ಎಂಬುದರ ಬಗ್ಗೆಯಾಗಿತ್ತು. ಎಲ್ಲರೂ “ಅಮ್ಮಾ ನಮ್ಮೇನೇಲಿರಲಿ, ನಮ್ಮನೇಲಿರಲಿ” ಅಂತ ಕಚ್ಚಾಡುತ್ತಿದ್ದರು.
ಈಗ. . . . ? “ಅಬ್ಬಾ, ಇಂತಹ ಸ್ವಾರ್ಥಿಗಳೂ ಇರುತ್ತಾರಾ” ಎಂದುಕೊಂಡಳು ಸಹನಾ.
“ಸಹನಾ ಜೊತೆ ಸಾಗಿ ಹಾಕಿಬಿಡೋಣ. ಅವಳೂ ನೋಡ್ಕೊಳ್ಲಿ.” ನಗು ಬಂತು.
‘ಅಮ್ಮಾ ನನ್ನ ಜೊತೆ ಬರ್ತಾಳಾ’ ಪ್ರಶ್ನೆ ಮೂಡಿತು. ಅಮ್ಮನತ್ತ ನೋಡಿದರೆ ಅವಳು ಸುಖವಾಗಿ ನಿದ್ರೆ ಮಾಡುತ್ತಿದ್ದಳು. ‘ಸಧ್ಯ, ಕೇಳಿಸಿಕೊಳ್ಳಲಿಲ್ಲವಲ್ಲ’ ಎಂದುಕೊಂಡು ಅಮ್ಮನನ್ನು ಎಬ್ಬಿಸಿ ಜ್ಯೂಸ್ ಮಾಡಿಕೊಟ್ಟು, “ಅಮ್ಮಾ ನಾನು ಹೋಗ್ಬೇಕು. ನಿನಗೆ ಯಾವಾಗ ಬೇಕಾದ್ರೂ ಅಲ್ಲಿಗೆ ಬಾ. ಅದು ಕೊಂಪೆಯಾದರೂ ಹೊತ್ತು ಕಳೆಯುವುದೇನೂ ಕಷ್ಟವಿಲ್ಲ” ಟೇಬಲ್ ಮೇಲೆ ದುಡ್ಡಿಟ್ಟು ಹೊರನಡೆದಳು.
ಹಾಲ್ಗೆ ಬಂದಾಗ ಎಲ್ಲರೂ “ಏನು ಇಷ್ಟು ಬೇಗ ಹೊರಟುಬಿಟ್ಟೆ. ಇನ್ನೂ ಸ್ವಲ್ಪ ಹೊತ್ತು ಇರು” ಎನ್ನುವವರೇ. ಇದು ನಿಜವಾದ ಪ್ರೀತಿಯಲ್ಲವೆಂದು, ಅಮ್ಮನನ್ನು ಅವಳ ಜೊತೆ ಕಳಿಸಲು ಇದು ಪೀಠಿಕೆಯೆಂದರಿತಳು.
“ಅಮ್ಮನಿಗಿಂತ ನಿನ್ನ ಕೆಲಸಾನೇ ಹೆಚ್ಚಾ?” ಗಿರಿಜಾಳ ಪ್ರಶ್ನೆ.
ತಾತ್ಸಾರವನ್ನೇ ತನ್ನ ಪಾಲಿಗಿಟ್ಟ ತಾಯಿಯ ಬಗ್ಗೆ ದ್ವೇಷ ಬೆಳೆಸಿಕೊಳ್ಳದಿದ್ದದ್ದೇ ಹೆಚ್ಚು, ಅದೂ ಅಜ್ಜಿಯಿಂದಾಗಿ. ಶಾಂತವಾಗಿಯೇ ಉತ್ತರಿಸಿದಳು. “ಅಮ್ಮ ಅಲ್ಲಿ ಬರುವುದಾದರೆ ಅಲ್ಲಿಗೆ ಕಳಿಸಿಕೊಡಿ, ನನಗೇನೂ ಅವಳು ಭಾರವಲ್ಲ.”
“ನನಗೇನೂ ಅಂತ ಕರ್ಮ ಬಂದಿಲ್ಲ,” ಅಮ್ಮ ಒಳಗಿನಿಂದಲೇ ಕೂಗಿದಳು.
ಆ ಕರ್ಕಶ ನುಡಿಗಳು ಅವಳಿಗೇನೂ ಹೊಸದಲ್ಲ. ‘ಅಯ್ಯೊ, ಅಮ್ಮ ನಿನಗಿನ್ನೂ ಇವರ ಬಗ್ಗೆ ಗೊತ್ತಿಲ್ಲ’ ಎಂದುಕೊಂಡು ಏನೂ ಉತ್ತರ ಕೊಡದೆ ಹೊರಟೇಬಿಟ್ಟಳು. ಬಸ್ಸಿನಲ್ಲಿ ಕುಳಿತಾಗ ಗತಕಾಲದ ಚಿತ್ರಗಳು ಮೂಡಿದವು. ಎಲ್ಲರೂ ಇದ್ದರೂ ತನ್ನವರಾರು ಇಲ್ಲವೆಂಬ ವಿಚಾರ ಮನಸ್ಸನ್ನು ಹಿಂಡಿತು. ಆದರೆ ಹಳ್ಳಿ ಹತ್ತಿರವಾಗುತ್ತಿದ್ದಂತೆ ಆ ನೋವು ಮಾಯವಾಯಿತು. ಬಸ್ಸಿನಿಂದ ಇಳಿಯುತ್ತಿದ್ದಂತೆ ಸಿದ್ದ ಲಗೇಜು ತೆಗೆದುಕೊಂಡ.
ಎರಡು ದಿನಗಳ ನಂತರ ಟೆಲಿಗ್ರಾಂ ಬಂತು, ಆದರೆ ಈ ಬಾರಿ ‘ತಕ್ಷಣ ಹೊರಟು ಬಾ, ನಿನ್ನೊಂದಿಗೆ ಮಾತನಾಡಬೇಕು - ಅಮ್ಮಾ’ ಎಂದಿತ್ತು. ವಿಷಯ ಅರ್ಥವಾದರೂ ಅವಳು ತಕ್ಷಣ ಹೊರಡುವಂತಿರಲಿಲ್ಲ. ಸಿದ್ದನ ಹೆಂಡತಿಗೆ ದಿನಗಳು ತುಂಬಿದ್ದವು. ಯಾವಾಗಲೋ ಎನ್ನುವಂತಿತ್ತು. ಯೋಚಿಸಿ, ಕೊನೆಗೊಮ್ಮೆ ಸಿದ್ದನನ್ನು ಕರೆದು ವಿಷಯ ತಿಳಿಸಿ ಅಮ್ಮನಿಗೆ ಒಂದು ಪತ್ರ ಬರೆದು ಕಳಿಸಿದಳು. “ನೀವು ನಮ್ಮ ಪಾಲಿನ ದೇವ್ರು” ಎನ್ನುತ್ತ ಅವಳ ಕಾಲಿಗೆ ಬಿದ್ದು ಸಿದ್ದ ಪಟ್ಟಣಕ್ಕೆ ಹೋದ.
ಅಮ್ಮಾ ಅಂದು ಸಂಜೆಯೇ ಸಿದ್ದನ ಜೊತೆ ಬಂದರು. ಟ್ಯಾಕ್ಸಿಯಿಂದ ಇಳಿಯುವ ಮುನ್ನವೇ ಸಹನಾಳನ್ನು ತಬ್ಬಿ ಅತ್ತರು, “ನನ್ನನ್ನು ಕ್ಷಮಿಸಿಬಿಡು ತಾಯಿ” ಎಂದರು. ಏಕೆ ಏನು, ಒಂದೂ ಅರ್ಥವಾಗದೆ ಅವರನ್ನು ಒಳಗೆ ಕರೆದುಕೊಂಡು ಹೋದಳು. “ಈಗ ಸ್ವಲ್ಪ ವಿಶ್ರಾಂತಿ ತಗೊ, ನಂತರ ಮಾತನಾಡೋಣ” ಎಂದಳು.
ಸಿದ್ದನಿಂದ ನಂತರ ತಿಳಿದ ವಿಷಯವಿಷ್ಟು, ಅವನು ಹೋದ ತಕ್ಷಣ ಅಮ್ಮನಿಗೆ ಚೀಟಿ
ಕೊಟ್ಟ. ಸಹನಾ ಹೋಗದಿದ್ದುದಕ್ಕಾಗಿ
ಆವರೆಲ್ಲಾ ಬಾಯಿಗೆ ಬಂದಂತೆ ಮಾತನಾಡಿದರು. ಅಮ್ಮಾ ಮಾತ್ರ ಆ ಚೀಟಿ ಓದಿ “ನಡಿಯಪ್ಪ ಹೋಗೋಣ” ಎಂದು ಹೇಳಿ ಹೊರಟೇಬಿಟ್ಟರು. ದಾರಿಯುದ್ದಕ್ಕೂ ಸಿದ್ದ ಸಹನಾಳ ಬಗ್ಗೆ ಹೇಳಿದ್ದೇ ಹೇಳಿದ್ದು, ಅಮ್ಮ ಕಣ್ಣೀರು ಸುರಿಸಿದ್ದೇ ಸುರಿಸಿದ್ದು. ‘ಆ ಮಗೂಗೆ ಅನ್ಯಾಯ ಮಾಡಿದೆನಪ್ಪ’ ಎಂದರಂತೆ, ಹಲವಾರು ಬಾರಿ.
“ನನಗಂತೂ ಏನೂ ತಿಳೀಲಿಲ್ಲವ್ವ. ನಾನೇನಾದ್ರೂ ತೆಪ್ಪು ಮಾಡುದ್ನ ಅಮ್ಮಾ” ಸಿದ್ದ
ಕೇಳಿದ ಪ್ರಶ್ನೆಗೆ, “ಇಲ್ಲ, ಈಗ ನೀನು ಮನೆಗೆ ಹೋಗು. ನಿಂಗೀನ ನೋಡ್ಕೊ ಹೋಗು. ಏನಾದ್ರೂ ಬೇಕಾದ್ರೆ ಬಾ” ಎಂದು ಹೇಳಿ ಕಳಿಸಿದಳು.
ಒಳಗೆ ಹೋಗಿ ನೋಡಿದರೆ ತಾಯಿ ಇನ್ನೂ ನಿದ್ರಿಸುತ್ತಿದ್ದಳು.
ಅವಳ ಹಣೆ ನೇವರಿಸುತ್ತಾ ಅಲ್ಲಿಯೇ ಕುಳಿತ ಸಹನಾಳ ಮುಖದ ಮೇಲೆ ಸಂತಸದ ಮುಗುಳ್ನಗು ಕಾಣಿಸಿಕೊಂಡಿತು.
- * -
ಸಹನಾಳ ಮೊಗದ ಮೇಲೆ ಮುಗುಳ್ನಗು ಕಂಡು “ಅಮ್ಮ ಈಗ ದೊಡ್ಡಮ್ಮಾವ್ರು.. . .”
ಗಂಗಮ್ಮ ಕೇಳಿದಳು. ಆಗಲೇ ಸಹನಾ ವಾಸ್ತವಕ್ಕೆ ಬಂದಿದ್ದು.
“ಆಮೇಲೆ ಅಮ್ಮ ನನ್ನ ಬಿಟ್ಟು ಎಲ್ಲೂ ಹೋಗಲೇ ಇಲ್ಲ” ಹೇಳುತ್ತಾ ಮೇಲೆದ್ದಳು.
“ಅವ್ವಾ, ನಾ ಬೆಳಿಗ್ಗೆ ಅಂದದ್ದನ್ನೆಲ್ಲಾ ಮರ್ತು ಬುಡಿ” ದೀನತೆಯಿಂದ ಕೇಳಿದಳು ಗಂಗಮ್ಮ.
ಅದಕ್ಕೇನೂ ಉತ್ತರಿಸದೆ ಮುಗುಳ್ನಕ್ಕು, ಮಲಗಿದ್ದ ಮಗುವಿನ ಕೆನ್ನೆಯನ್ನೊಮ್ಮೆ ತಟ್ಟಿ
ಹೊರನಡೆದಳು ಸಹನಾ. ಹೆಮ್ಮೆಯಿಂದ ಅವಳನ್ನೇ ದಿಟ್ಟಿಸಿ ನೋಡುತ್ತಾ ನಿಂತರು ಗಂಗಮ್ಮ ಮತ್ತವಳ ಅಮ್ಮ.
*
- ಸುಧಾ ಜಿ
No comments:
Post a Comment